ಬೆಂಗಳೂರು: ನೂತನ ಮಂತ್ರಿಮಂಡಲದಲ್ಲಿ ಪ್ರವಾಸೋದ್ಯಮ ಖಾತೆ ನೀಡಿದ್ದಕ್ಕೆ ಮುನಿಸಿಕೊಂಡು ರಾಜೀನಾಮೆ ನೀಡಲು ಮುಂದಾಗಿದ್ದ ಸಚಿವ ಆನಂದ್ ಸಿಂಗ್ ಅವರು ಇಂದು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಿದ್ದಾರೆ.
ಅಸಮಾಧಾನಿತ ಸಚಿವ ಆನಂದ್ಸಿಂಗ್ನ ಬರ ಮಾಡಿಕೊಂಡ ಯಡಿಯೂರಪ್ಪ, ಏನಪ್ಪಾ ಆನಂದ್ ಸಿಂಗ್, ಏನಪ್ಪಾ ನಿನ್ನ ಅಸಮಾಧಾನ ಎಂದು ಶುರುವಿನಲ್ಲಿ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಈಗ ನನಗೆ ಮೊದಲಿನಂತೆ ಅಧಿಕಾರ ಇಲ್ಲಪ್ಪಾ, ಮೊದಲಾಗಿದ್ರೆ ನಾನೇ ನಿನ್ನ ಸಮಸ್ಯೆ ಪರಿಹರಿಸ್ತಿದ್ದೆ. ಈಗ ಹೈಕಮಾಂಡ್ ಇದೆ, ಬೊಮ್ಮಾಯಿಯವರಿದ್ದಾರೆ. ಅವರ ಜೊತೆ ಕೂತು ತಾಳ್ಮೆಯಿಂದ ಮಾತನಾಡಪ್ಪ ಎಂದು ಆನಂದ್ ಸಿಂಗ್ ಗೆ ಬಿಎಸ್ ವೈ ಬುದ್ಧಿವಾದ ಹೇಳಿದ್ದಾರೆ.
ಈ ವೇಳೆ ಅನಂದ್ ಸಿಂಗ್ ಅಪ್ಪಾಜಿ..ಹಲವು ವರ್ಷಗಳಿಂದ ನೀವು ನನ್ನನ್ನ ನೋಡ್ತಿದ್ದೀರ. ನಾನು ಯಾವತ್ತಾದ್ರೂ ಪಕ್ಷದ ವಿರುದ್ಧ ಮಾತನಾಡಿದ್ದೀನಾ, ಹೋಗ್ಲಿ ಸರ್ಕಾರದ ಬಗ್ಗೆ ಮಾತನಾಡಿದ್ದೇನಾ? ಅನ್ನ ಕೊಟ್ಟ ಪಕ್ಷ,ಸರ್ಕಾರದ ಬಗ್ಗೆ ನಾನುಮಾತನಾಡಿಲ್ಲ. ಹಿಂದೆ ನಾನು ಕೇಳಿದ್ದೆಲ್ಲವನ್ನೂ ನೀವು ಕೊಟ್ಟಿದ್ದೀರ, ನಿಮ್ಮನ್ನ ನಾನು ತಂದೆಯಂತೆಯೇ ಗೌರವಿಸ್ತಿದ್ದೇನೆ. ಪಕ್ಷಕ್ಕಾಗಿ ಎಷ್ಟೆಲ್ಲಾ ಕೆಲಸ ಮಾಡಿದ್ದೀನಿ. ನನಗೆ ಪ್ರವಾಸೋದ್ಯಮ, ಪರಿಸರ ಖಾತೆ ಕೊಟ್ಟಿದ್ದಾರೆ. ಆದರೆ ನಾನು ಅರಣ್ಯ, ಇಂಧನ ಇಲಾಖೆ ಕೇಳಿದ್ದೆ. ಸಿಎಂ ಬಳಿಯೂ ಇದನ್ನೇ ಹೇಳಿದ್ದೆ, ಆಗಲಿ ಎಂದವರು ಈ ರೀತಿ ಮಾಡಿದ್ದಾರೆ. ನಾನು ಇನ್ನೆಷ್ಟು ದಿನ ರಾಜಕಾರಣದಲ್ಲಿರ್ತೇನೋ ಗೊತ್ತಿಲ್ಲ. ಈಗ ಇಷ್ಟೆಲ್ಲಾ ರಾಮಾಯಣ ಆಗಿದೆ, ನನ್ನ ಮನಸ್ಸಿಗೂ ತುಂಬಾ ನೋವಾಗಿದೆ ಎಂದಿದ್ದಾರೆ, ಕೆಲಸಮಯ ಕಳೆದು ನಂತರ ತೆರಳಿದ್ದಾರೆ.