ಚಾಮರಾಜನಗರ: ಕೋವಿಡ್-19 ವೈರಾಣು ಹರಡದಂತೆ ತಡೆಯಲು ಜಾರಿಯಲ್ಲಿರುವ ಲಾಕ್ಡೌನ್ ಹಿನ್ನೆಲೆಯಲ್ಲಿ ಪವಿತ್ರ ರಂಜಾನ್ ತಿಂಗಳಿನಲ್ಲಿ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಯನ್ನೊಳಗೊಂಡಂತೆ ದೈನಂದಿನ ಸಾಮೂಹಿಕ ಪ್ರಾರ್ಥನೆಯ ಜೊತೆಗೆ ತರಾವ್ಹಿ ನಮಾಜನ್ನು ಮಸೀದಿಗಳಲ್ಲಿ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ. ಮನೆಯಲ್ಲಿಯೇ ಇದ್ದು ಎಲ್ಲಾ ರೀತಿಯ ಪ್ರಾರ್ಥನೆ, ನಮಾಜನ್ನು ನಿರ್ವಹಿಸುವಂತೆ ಕರ್ನಾಟಕ ರಾಜ್ಯ ವಕ್ಛ್ ಮಂಡಳಿ ಮನವಿ ಮಾಡಿದೆ.
ಮನೆಯಲ್ಲಿಯೇ ಇದ್ದುಕೊಂಡು ಉಪವಾಸ ಆಚರಣೆ ಮಾಡಿ ಶಬೆಖದ್ರ ಪವಿತ್ರ ಶುಭರಾತ್ರಿಯಲ್ಲಿ ಸಕಲ ಮಾನವ ಕುಲದ ಒಳಿತಿಗಾಗಿ ಹಾಗೂ ಕೋವಿಡ್-19 ಸೋಂಕಿನ ನಿವಾರಣೆಗಾಗಿ ಅಲ್ಲಾಹುನಲ್ಲಿ ಪ್ರಾರ್ಥಿಸುವುದು.
ಪವಿತ್ರ ರಂಜಾನ್ ತಿಂಗಳ ಉಪವಾಸ ಆಚರಣೆಗೆ ಸಂಬಂಧಪಟ್ಟಂತೆ ಇಫ್ತಾರ್ ಕೂಟ ಏರ್ಪಡಿಸುವುದಾಗಲಿ, ಮಸೀದಿಯ ಸುತ್ತಮುತ್ತ ಆಹಾರ ಪದಾರ್ಥಗಳ ಅಂಗಡಿಗಳನ್ನು ತೆರೆಯುವುದಾಗಲಿ, ಯುವಕರು ರಾತ್ರಿ ಸಮಯದಲ್ಲಿ ರಸ್ತೆ, ಬೀದಿ, ಮೊಹಲ್ಲಾಗಳಲ್ಲಿ ಅನಾವಶ್ಯಕವಾಗಿ ಓಡಾಡುವುದಾಗಲಿ ಮಾಡಬಾರದು.
ಪ್ರಮುಖ ಅಂಶಗಳ ಕುರಿತಂತೆ ಸರ್ಕಾರ, ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ ಸಮಾಜದ ಹಿತದೃಷ್ಠಿಯನ್ನು ಕಾಪಾಡುವ ಮೂಲಕ ಶಾಂತಿಯುತವಾಗಿ ಪವಿತ್ರ ರಂಜಾನ್ ಮಾಸಾಚರಣೆ ಮಾಡುವಂತೆ ಜಿಲ್ಲಾ ವಕ್ಛ್ ಅಧಿಕಾರಿ ತವಾಬ್ ಬೇಗ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.