ಮೈಸೂರು: ಪೊಲೀಸ್ ಇಲಾಖೆಯಲ್ಲಿ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿ ದರ್ಪ ತೋರಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಬಾಲಕನನ್ನು ಗೇಟ್ಗೆ ಕಟ್ಟಿ ಹಾಕಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಲಿಸಪ್ಪನ ಈ ಹೀನಕೃತ್ಯ ಇದೀಗ ಮಕ್ಕಳ ಹಕ್ಕುಗಳ ಆಯೋಗದ ಮೆಟ್ಟಿಲೇರಿದೆ.
ಮೈಸೂರಿನ ಗಾಯಿತ್ರಿಪುರಂನ 12 ವರ್ಷದ ಬಾಲಕನೊಬ್ಬ ಮನೆಯಲ್ಲಿ ನಡೆಯುವ ಪೂಜೆಗೆಂದು ಬೇವಿನ ಸೊಪ್ಪನ್ನು ತರಲು ಬಂದಿದ್ದಾನೆ. ಈ ವೇಳೆ ಎಸ್ಐ ವಾಸವಿದ್ದ ಮನೆಯ ಮುಂದೆ ಇದ್ದ ಮರದಲ್ಲಿ ಬೇವಿನ ಸೊಪ್ಪನ್ನು ಕಿತ್ತಿದ್ದಾನೆ. ಕೂಡಲೆ ಹೊರ ಬಂದ ಎಸ್ಐ, ಆತನನ್ನು ಮನೆಯ ಮುಂದಿನ ಗೇಟ್ಗೆ ಕಟ್ಟಿಹಾಕಿದ್ದಾರೆ. ಇದರಿಂದಾಗಿ ಬಾಲಕ ಅಳಲಾರಂಭಿಸಿದ್ದಾನೆ.
ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಸ್ಥಳದಲ್ಲಿ ಜಮಾಯಿಸಿದ್ದಾರೆ. ಜನರು ಗುಂಪುಗೂಡುವುದನ್ನು ಅರಿತ ಎಸ್ಐ ಮನೆಯಿಂದ ಹೊರಬಂದು ಬಾಲಕನನ್ನು ಬಿಟ್ಟು ಕಳುಹಿಸಿದ್ದಾರೆ. ಈ ಘಟನೆಯಲ್ಲಿ ಅಲ್ಲಿದ್ದ ಸಾರ್ವಜನಿಕರು ಮೊಬೈಲ್ ಫೋನ್ ಮೂಲಕ ಚಿತ್ರೀಕರಿಸಿದ್ದಾರೆ. ನಂತರ ಅದನ್ನು ವೈರಲ್ ಮಾಡಿದ್ದಾರೆ.
ಅಪ್ರಾಪ್ತನ ಮೇಲೆ ಪೊಲೀಸ್ ಅಧಿಕಾರಿ ದರ್ಪ ನಡೆಸಿ ಗೇಟ್ಗೆ ಕಟ್ಟಿ ಹಾಕಿರುವ ವಿಡಿಯೊ ಚಿತ್ರಣ ಗಮನಿಸಿದ ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಅವರು ಕೂಡಲೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಸಿಡಬ್ಲ್ಯೂಸಿ ಘಟಕದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪೊಲೀಸ್ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಳ್ಳುವ ತಪ್ಪಿತಸ್ಥ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.