ಮಂಡ್ಯ: ಇಲ್ಲಿಗೆ ಸಮೀಪದ ಮಾಯಣ್ಣನ ಕೊಪ್ಪಲಿನ ರೈತರೊಬ್ಬರು ತಮ್ಮ ಜಮೀನಿನಲ್ಲಿ ಬಿಳಿ ರಾಗಿ ಬೆಳೆದು ಒಳ್ಳೆಯ ಇಳುವರಿ ಜತೆಗೇ ಉತ್ತಮ ಆದಾಯವನ್ನೂ ಪಡೆದಿದ್ದಾರೆ.
ರೈತ ಆನಂದ್ ಅವರು ಮೊದಲ ಬಾರಿಗೆ ತಮ್ಮ ಜಮೀನಿನಲ್ಲಿ ಬಿಳಿರಾಗಿ ಬೆಳೆದಿದ್ದಾರೆ. ಕ್ವಿಂಟಾಲ್ಗೆ ಐದು ಸಾವಿರ ಬೆಲೆ ಸಿಗುತ್ತಿರುವುದರಿಂದ ಸಂತಸಗೊಂಡಿರುವ ಅವರು, ʻಬಿಳಿರಾಗಿಯ ಬೇಸಾಯ-ಆದಾಯ ಎರಡೂ ಚೆನ್ನಾಗಿದೆ. ಇನ್ನೂ ಆರೈಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಸಿಗುತ್ತದೆʼ ಎಂದು ಸ್ಪಷ್ಟವಾಗಿ ಹೇಳುತ್ತಾರೆ.
ಕೆಎಂಆರ್-340 ತಳಿಯ ಬಿಳಿರಾಗಿಯ ಮಹತ್ವದ ಕುರಿತು ಅವರು ಹೇಳಿದ ಮೇಲಿನ ಹೊಗಳಿಕೆಯ ಮಾತು, ಮೂರು ವರ್ಷಗಳ ಹಿಂದೆ ದೇಶದ ರೈತರಿಗಾಗಿ ಬಿಳಿರಾಗಿ ಸಂಶೋಧಿಸಿ ಕೊಟ್ಟ ನಮ್ಮ ಹೆಮ್ಮೆಯ ಕನ್ನಡಿಗರಾದ ಕೃಷಿ ವಿಜ್ಞಾನಿ ಡಾ. ಸಿ.ಆರ್.ರವಿಶಂಕರ್ ಅವರಿಗೆ ಸಲ್ಲುವ ಬಹುದೊಡ್ಡ ಗೌರವವಾಗಿದೆ ಎನ್ನುತ್ತಾರೆ ಸ್ಟಾರ್ಟಪ್ ಎಂಟರ್ಪ್ರೈನರ್ನ ಮಂಡ್ಯ ಪ್ರಭು.ಮನುಷ್ಯನ ಆರೋಗ್ಯಕ್ಕೆ ಮಾರಕವಾದ ಮೈದಾ ಹಿಟ್ಟಿಗೆ ಪರ್ಯಾಯವಾದ ಬಿಳಿರಾಗಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ. ತನ್ನ ರೋಗನಿರೋಧಕ ಶಕ್ತಿ ಮತ್ತು ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಕಾರಣಕ್ಕಾಗಿ ಗ್ರಾಹಕರನ್ನು ಸೆಳೆಯುತ್ತಿದೆ. ಬುದ್ಧಿವಂತ ರೈತರು ಬಿಳಿರಾಗಿಯ ಕಡೆ ಗಮನಹರಿಸಿ. ಬಿಳಿರಾಗಿ ಬೇಸಾಯದಿಂದ ಆದಾಯ ಖಂಡಿತ ಹೆಚ್ಚಾಗುತ್ತದೆ.
AgriStartUp ಕಟ್ಟುವ ಸಲುವಾಗಿ ಉತ್ತಮ ರೈತರನ್ನು ಸಂದರ್ಶಿಸುತ್ತಿರುವ ನನಗೆ ಪ್ರಗತಿಪರ ರೈತ ಆನಂದಣ್ಣ ಒಬ್ಬ ಮುಂದಾಲೋಚನೆಯ ಮಾದರಿ ಕೃಷಿಕ ಎಂಬುದು ನಿನ್ನೆ ತಿಳಿಯಿತು. ಇಲ್ಲಿಗೆ ಹತ್ತಿರದಲ್ಲಿರುವ ವಿಸಿ ಫಾರ್ಮ್ ಕೃಷಿ ಸಂಶೋಧನಾ ಕೇಂದ್ರದ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ಇವರು ಹಲವು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಹತ್ತಾರು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಕಬ್ಬು, ಬಿಳಿರಾಗಿಯ ಜತೆಗೆ ಐತಿಹಾಸಿಕ ರಾಜಮುಡಿ ಭತ್ತವನ್ನು ಈ ಭಾಗದಲ್ಲಿ ಅತ್ಯಧಿಕ ಇಳುವರಿಯೊಂದಿಗೆ ಬೆಳೆದು ಅಕ್ಕಪಕ್ಕದ ರೈತರಿಗೂ ಬಿತ್ತನೆ ಬೀಜಗಳನ್ನು ನೀಡುತ್ತಾ ಕೃಷಿ ಸಂಸ್ಕೃತಿಯ ಸಂರಕ್ಷಣೆ ಮಾಡುತ್ತಿದ್ದಾರೆ.
ಐಟಿಐ ಓದಿಕೊಂಡ ಮಗನನ್ನು ಬೆಂಗಳೂರಿಗೆ ಕೆಲಸಕ್ಕೆ ಕಳಿಸದೆ ವ್ಯವಸಾಯದಲ್ಲಿ ತೊಡಗುವಂತೆ ಅವರು ಅಂದು ಪ್ರೇರಿಪಿಸಿದುದರ ಪರಿಣಾಮ ಇಂದು ಈ ಭಾಗದಲ್ಲಿ ಕೃಷಿ ವಿಜ್ಞಾನಿಗಳೊಂದಿಗೆ, ಪ್ರಗತಿಪರ ಕೃಷಿಕರೊಂದಿಗೆ ಒಡನಾಟ ಇಟ್ಟುಕೊಂಡು ಅವರ ಜ್ಞಾನ, ಸಂಶೋಧನೆಗಳನ್ನು ತಮ್ಮ ಹೊಲಗದ್ದೆಗಳಲ್ಲಿ ಸಾಕಾರಗೊಳಿಸುವ ವಿದ್ಯಾವಂತ ಯುವ ರೈತರ ಸಂಖ್ಯೆ ಹೆಚ್ಚಾಗುತ್ತಿರುವುದು ದೇಶದ ಆಹಾರ ಭದ್ರತೆಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದು ಪ್ರಭು ಅವರು ಅಭಿಪ್ರಾಯಪಟ್ಟಿದ್ದಾರೆ.