ಹುಬ್ಬಳ್ಳಿ: ನೂರು ದಿನಗಳಲ್ಲಿ ಬಂದತಹ ಸವಾಲುಗಳುನ್ನು ಸರಿಯಾದ ನಿರ್ಣಯಗಳಿಂದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾದ ಆಡಳಿತ ನೀಡಿರುವುದು ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇದೇ ರೀತಿ ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ಮನೆಯ ಬಾಗಿಲಿಗೆ ಸರ್ಕಾರವೆನ್ನುವ ಅಂಶವನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸುವ ಗುರಿ ಇದೆ ಎಂದರು.
ನೂರು ದಿನಗಳಲ್ಲಿ ಸರ್ಕಾರ ಭದ್ರ ಮತ್ತು ಭರವಸೆ ಹೆಜ್ಜೆಯಿಟ್ಟಿದ್ದು, ಮುಂದಿನ ದಿನಗಳಲ್ಲಿ ಜನಪರವಾದಂತಹ ದಿಕ್ಕಿನಲ್ಲಿ ಸಾಗಲು ಅನುಕೂಲವಾಗಿದೆ. ನೂರು ದಿನದಲ್ಲಿ ಅಮೃತ ಯೋಜನೆ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಬಡವರಿಗೆ ಸಂದ್ಯಾ ಸುರಕ್ಷಾ, ಅಂಗವಿಕಲರಿಗೆ ಮತ್ತು ವೃದ್ಧಾಪ್ಯರಿಗೆ ಮಾಶಾಸನ ಹೆಚ್ಚಿಸಲಾಗಿದೆ ಎಂದರು.
ಈಗ ತಾನೇ ಆರ್ಥಿಕ ಸುಧಾರಣೆಯಾಗುತ್ತಿದೆ. ಇದನ್ನು ನೋಡಿಕೊಂಡು ವಿಶೇಷವಾದ ಯೋಜನೆಗಳ ಮೂಲಕ ಬರುವಂತಹ ದಿನಗಳಲ್ಲಿ ಜನಸಾಮಾನ್ಯರ ಹತ್ತಿರ ಸರ್ಕಾರ ಹೋಗುವಂತಾಗಬೇಕು. ಆರ್ಥಿಕತೆಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಹೆಣ್ಣುಮಕ್ಕಳ ಸೇರಿದಂತೆ ಮಾನವಸಂಪನ್ಮೂಲ ತೊಡಗಿಕೊಳ್ಳುವಂತಹ ಉತ್ತಮ ಕಾರ್ಯಕ್ರಮ ತರುವ ಉದ್ದೇಶವಿದೆ ಎಂದು ತಿಳಿಸಿದರು.
ಜನಸೇವಕ ಯೋಜನೆಯನ್ನು ಜನವರಿ 26 ರಿಂದ ರಾಜ್ಯಾದ್ಯಂತ ಜಾರಿಗೆಗೊಳಿಸಲಾಗುವುದು. ಇದು ಉತ್ತಮವಾದ ಯೋಜನೆಯಾಗಿದೆ ಎಂದರು.