ಹಾಸನ: ಇತ್ತೀಚೆಗೆ ನಿಧನರಾದ ಜಿಲ್ಲೆಯ ಪ್ರಗತಿಪರ ರೈತ, ಪರಸರ ಪ್ರೇಮಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕೃಷಿ ಪ್ರಶಸ್ತಿ ಪುರಸ್ಕೃತರಾದ ದೊಡ್ಡಮಗ್ಗೆಯ ಎಂ.ಜಿ.ತಿಮ್ಮೇಗೌಡರ ಉತ್ತರಾಧಿಕಾರ್ಯ ಏ.23ರಂದು ನಡೆಯಲಿದ್ದು, ಈ ಕಾರ್ಯದಲ್ಲಿ ಗಿಡಗಳನ್ನು ವಿತರಿಸಲು ಕುಟುಂಬ ವರ್ಗ ತೀರ್ಮಾನಿಸಿದೆ.
ಪರಿಸರವನ್ನೇ ಉಸಿರನ್ನಾಗಿಸಿಕೊಂಡು ಬದುಕಿದ ಎಂ.ಜೆ.ತಿಮ್ಮೇಗೌಡರು ನಿಧನರಾಗಿದ್ದು, ಅವರು ತಮ್ಮ ಜೀವಿತಾವಧಿಯಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಪರಿಸರ ಸಂರಕ್ಷಣೆಯತ್ತ ಒಲವು ತೋರುತ್ತಿದ್ದರಿಂದ ಅವರ ಆತ್ಮಕ್ಕೆ ಶಾಂತಿ ಕೋರುವ ಮತ್ತು ಪರಿಸರದ ಕಾಳಜಿ ಎಲ್ಲರಲ್ಲೂ ಬೆಳೆಯಲಿ ಎಂಬ ಉದ್ದೇಶದಿಂದ ಉತ್ತರ ಕ್ರಿಯಾದಿ ಕಾರ್ಯಕ್ಕೆ ಆಗಮಿಸುವ ಬಂಧು ಬಾಂಧವರು, ಸ್ನೇಹಿತರು, ಹಿತೈಷಿಗಳು ಹಾಗೂ ಸಾರ್ವಜನಿಕರಿಗೆ 3000 ವಿವಿಧ ಬಗೆಯ ಗಿಡಗಳನ್ನು ವಿತರಿಸುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕುಟುಂಬ ಮೂಲಗಳು ಹೇಳಿವೆ.
ಹಾಗೆ ನೋಡಿದರೆ ಪ್ರಗತಿ ಪರ ರೈತರಾಗಿದ್ದ ದಿ. ಎಂ.ಜೆ.ತಿಮ್ಮೇಗೌಡರವರು ಮಣ್ಣಿನ ಮಡಿಲಲ್ಲಿ ಮಮತೆಯಿಂದ ದುಡಿದವರು. ಆಧುನಿಕ ತಂತ್ರಜ್ಞಾನ ಬಳಸಿ ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ಸೂಕ್ತ ಬೆಳೆಗಳನ್ನು ಬೆಳೆದು ಯಶಸ್ಸು ಕಂಡಿದ್ದರು. ಇವರ ಕೃಷಿ ಸಾಧನೆಗಾಗಿ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಅರಸಿ ಬಂದಿದೆ. 2003ರಲ್ಲಿ ಕೇಂದ್ರ ಸರ್ಕಾರದಿಂದ ತಂಬಾಕು ಬೆಳೆಗೆ ಬೆಸ್ಟ್ ಗ್ರೋವರ್ ಪ್ರಶಸ್ತಿ, 2005ರಲ್ಲಿ ಬೆಂಗಳೂರಿನಲ್ಲಿ ನಡೆದ ಸುವರ್ಣ ಕರ್ನಾಟಕ ಕೃಷಿ ಮೇಳದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, 2009 ರಲ್ಲಿ ಬೆಂಗಳೂರಿನಲ್ಲಿ ನಡೆದ ಹೈನುಗಾರಿಕೆ ಸಮ್ಮೇಳನದಲ್ಲಿ ಜಿಲ್ಲೆಯ ಉತ್ತಮ ಹೈನುಗಾರಿಕಾ ರೈತ ಪ್ರಶಸ್ತಿ ಬಂದಿದೆ.
ಇವರು ಕೃಷಿ ಭೂಮಿಯಲ್ಲಿ ಶ್ರೀಗಂಧ, ಸಪೋಟ, ಹೆಬ್ಬೇವು, ಸಿಲ್ವರ್, ಅಡಿಕೆ, ತೆಂಗು, ಮಾವು, ಬಾಳೆ, ಏಲಕ್ಕಿ, ತಾಳೆ, ಜಾಯಿಕಾಯಿ ಹಾಗೂ ವೆನಿಲ್ಲಾ ಬೆಳೆಯನ್ನು ಬೆಳೆದಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ವೃಕ್ಷ ಸಮೂಹ ವನ್ನು ಸೃಷ್ಟಿಸಿರುವ ಕೀರ್ತಿಯೂ ಇವರಿಗಿದೆ. ವಾಸದ ಮನೆ ಲಕ್ಮ್ಷಿ ಫಾರ್ಮ್ಸನ ಒಳ ಹೋದರೆ ಅಲ್ಲಿ ಸಸ್ಯಲೋಕವೇ ಸೃಷ್ಟಿಯಾಗಿರುವುದು ಗೋಚರಿಸುತ್ತದೆ.