ಪೊನ್ನಂಪೇಟೆ: ಕೊಡಗಿನಲ್ಲಿ ಮಿತಿ ಮೀರಿರುವ ಕಾಡಾನೆ ಹಾವಳಿಯನ್ನು ಕೂಡಲೇ ನಿಯಂತ್ರಿಸುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಹಿರಿಯ ಸದಸ್ಯರಾದ ಮೂಕೊಂಡ ವಿಜು ಸುಬ್ರಮಣಿ ಅವರು ರಾಜ್ಯ ಸರಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವರಾದ ಆನಂದ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಕೊಡಗಿನಲ್ಲಿ ಹಲವು ವರ್ಷಗಳಿಂದ ಜ್ವಲಂತ ಸಮಸ್ಯೆಯಾಗಿ ಜನರ ನಿದ್ದೆಗೆಡಿಸಿರುವ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಜಿಲ್ಲೆಯ ಜನರ ಬದುಕು ಮತ್ತಷ್ಟು ದುಸ್ತರವಾಗಲಿದೆ ಎಂದು ಅವರು ಸಚಿವರಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಈ ಕುರಿತು ಸಚಿವರಿಗೆ ಬರೆದ ಪತ್ರವನ್ನು ಪತ್ರಿಕೆಗಳಿಗೆ ಬಿಡುಗಡೆಗೊಳಿಸಿರುವ ವಿಜು ಸುಬ್ರಮಣಿ ಅವರು, ಕೊಡಗಿನ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಾಡುಪ್ರಾಣಿಗಳಿಂದ ತಮ್ಮ ಬೆಳೆ ಉಳಿಸಿಕೊಳ್ಳುವುದು ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಹಲವು ವರ್ಷಗಳಿಂದ ಕಾಡಾನೆಗಳ ದಾಳಿಯಿಂದ ರೈತರು ಕಂಗಾಲಾಗಿದ್ದಾರೆ. ಈಚೆಗಂತೂ ಕಾಡಾನೆಗಳ ಹಾವಳಿ ಮತ್ತಷ್ಟು ಹೆಚ್ಚಿರುವುದು ರೈತರ ನಿದ್ದೆಗೆಡಿಸಿದೆ. ಆದ್ದರಿಂದ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಅತ್ಯಗತ್ಯವಾಗಿದ್ದು, ಸರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ದಕ್ಷಿಣ ಕೊಡಗಿನ ಪಾಲಿಬೆಟ್ಟ, ಹುಂಡಿ, ಚೆನ್ನಯ್ಯನಕೋಟೆ, ಮೇಕೂರು ಹೊಸ್ಕೇರಿ, ಸಿದ್ದಾಪುರ, ಹೊಸೂರು ಕಳತ್ಮಾಡು, ಅಮ್ಮತ್ತಿ, ಬಿಳುಗುಂದ, ಪುಲಿಯೇರಿ, ಪೊನ್ನಂಪೇಟೆ ತಾಲೂಕಿನ ತಿತಿಮತಿ, ದೇವರಪುರ, ಮಾಯಮುಡಿ, ಧನುಗಾಲ, ಸುಳುಗೋಡು ಸೇರಿದಂತೆ ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಕೊಡಗಿನ ಒಟ್ಟು 40 ಕ್ಕೂ ಅಧಿಕ ಗ್ರಾಮಗಳಲ್ಲಿ ಕಳೆದ ಹಲವು ವರ್ಷಗಳಿಂದ ಕಾಡಾನೆ ಹಾವಳಿಯಿಂದ ಅಮೂಲ್ಯವಾದ ನೂರಾರು ಮನುಷ್ಯರ ಜೀವಹಾನಿಯಾಗಿದೆ. ಅಲ್ಲದೆ ರೈತ ಬೆವರು ಸುರಿಸಿ ದುಡಿದ ನೂರಾರು ಎಕರೆ ಬೆಳೆ ನಾಶಪಡಿಸಿರುವ ಬಗ್ಗೆ ಸರಕಾರದ ಬಳಿಯೇ ಅಧಿಕೃತ ದಾಖಲೆಗಳಿವೆ. ಅದಾಗ್ಯೂ ಕೊಡಗಿನಲ್ಲಿ ದಿನಕಳೆದಂತೆ ಕಾಡಾನೆಗಳ ಹಾವಳಿ ಹೆಚ್ಚಾಗತೊಡಗಿದೆ. ಆದ್ದರಿಂದ ಕೊಡಗಿನ ಬೆಳೆಗಾರರಿಗೆ ಸೂಕ್ತ ರಕ್ಷಣೆ ನೀಡಬೇಕಾಗಿರುವುದು ಸರಕಾರದ ಹೊಣೆಗಾರಿಕೆಯಾಗಿರುವುದರಿಂದ ಸಚಿವರು ಕೂಡಲೇ ಈ ಬಗ್ಗೆ ಗಮನಹರಿಸಬೇಕು. ಅಲ್ಲದೆ ಕೊಡಗಿಗೆ ಭೇಟಿ ನೀಡಿ ರಾಜ್ಯಮಟ್ಟದ ಅರಣ್ಯಾಧಿಕಾರಿಗಳ ಸೇರಿದಂತೆ ಉನ್ನತ ಅಧಿಕಾರಿಗಳ ಮಹತ್ವದ ಸಭೆಯೊಂದನ್ನು ಇಲ್ಲಿಯೇ ಕರೆದು ಶಾಶ್ವತ ಪರಿಹಾರಕ್ಕೆ ರೂಪುರೇಷೆ ಸಿದ್ಧಪಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.