ಚೆನೈ: ಭಾರತೀಯ ಕರಾವಳಿ ಕಾವಲು ಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ಭಾನುವಾರ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಕ್ಷಣಾ ಸಚಿವರನ್ನು ಐಸಿಜಿ ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಬೇಕಿದ್ದ ರಾಕೇಶ್ ಅವರನ್ನು ಭಾನುವಾರ ಬೆಳಿಗ್ಗೆ ಅಧಿಕಾರಿಗಳ ಸಭೆ ಮಧ್ಯೆ ಅಸ್ವಸ್ಥತೆ ಕಾರಣದಿಂದ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆಗೆ ಸ್ಪಂದಿಸದೇ ಸಂಜೆ ಹೊತ್ತಿಗೆ ಇಹಲೋಕ ತ್ಯಜಿಸಿದ್ದಾರೆ.
ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜನಾಥ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ, ಪಾಲ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಕೋಸ್ಟ್ ಗಾರ್ಡ್ ನ 25 ನೇ ಮಹಾನಿರ್ದೇಶಕರಾಗಿದ್ದ ಪಾಲ್ ಅತ್ಯಂತ ಸಮರ್ಥ ಹಾಗೂ ಬದ್ಧತೆ ಹೊಂದಿದ್ದ ಅಧಿಕಾರಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.”ಭಾರತೀಯ ಕರಾವಳಿ ಕಾವಲು ಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಸಮರ್ಥ ಮತ್ತು ಬದ್ಧತೆ ಹೊಂದಿದ್ದ ಅಧಿಕಾರಿಯಾಗಿದ್ದು, ಅವರ ನಾಯಕತ್ವದಲ್ಲಿ ಐಸಿಜಿ, ದೊಡ್ಡ ಸಾಧನೆಗಳನ್ನು ಮಾಡಿದ್ದು, ಅವರು ಭಾರತೀಯ ಸಾಗರ ಭದ್ರತೆಯನ್ನು ಬಲಿಷ್ಠಗೊಳಿಸಿದ್ದರು. ಅವರ ದುಃಖತಪ್ತ ಕುಟುಂಬಕ್ಕೆ ಸಾಂತ್ವನಗಳು” ಎಂದು ಸಿಂಗ್ ಹೇಳಿದ್ದಾರೆ.
ತಮ್ಮ 34 ವರ್ಷಗಳ ಸೇವಾವಧಿಯಲ್ಲಿ ರಾಕೇಶ್ ಅವರು ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು.