ಹೊಸದಿಲ್ಲಿ: ಕೋಲ್ಕತಾ ಟ್ರೈನಿ ವೈದ್ಯೆ ಅ*ತ್ಯಾಚಾರ ಮತ್ತು ಹ*ತ್ಯೆಯನ್ನು ತೀವ್ರವಾಗಿ ಖಂಡಿಸಿರುವ 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಲಿಪಶು ನಿರ್ಭಯಾಳ ತಾಯಿ ಆಶಾದೇವಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹಿಸಿದ್ದಾರೆ.
‘ಸಿಎಂ ಮಮತಾ ಬ್ಯಾನರ್ಜಿ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾಗಿದ್ದಾರೆ. ತಮ್ಮ ಅಧಿಕಾರವನ್ನು ಬಳಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಬದಲು ಪ್ರತಿಭಟನೆ ನಡೆಸುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಆಶಾದೇವಿ ಪಿಟಿಐಗೆ ಹೇಳಿಕೆ ನೀಡಿ ಆಕ್ರೋಶ ಹೊರ ಹಾಕಿದ್ದಾರೆ.
ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನ್ಯಾಯಕ್ಕಾಗಿ ಆಗ್ರಹಿಸಿ ಶುಕ್ರವಾರ ಕೋಲ್ಕತಾದ ಮೌಲಾಲಿಯಿಂದ ಡೊರಿನಾ ಕ್ರಾಸಿಂಗ್ವರೆಗೆ ಮಮತಾ ಬ್ಯಾನರ್ಜಿ ಪ್ರತಿಭಟನಾ ರ್ಯಾಲಿ ನಡೆಸಿ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದರು. ಈ ಕುರಿತು ಬಿಜೆಪಿ ಸೇರಿ ಹಲವು ಪಕ್ಷಗಳು ತೀವ್ರ ಲೇವಡಿ ಮಾಡಿದ್ದು, ನ್ಯಾಯ ಕೊಡಿಸಬೇಕಾದವರೇ ಪ್ರತಿಭಟನೆ ನಡೆಸಿದರೆ ಹೇಗೆ ಎಂದು ಪ್ರಶ್ನಿಸಿವೆ.