ಮುಂಬೈ: ವಿರೋಧ ಪಕ್ಷದ ನಾಯಕರು ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಇಷ್ಟಪಟ್ಟು ಹೋಗುತ್ತಿಲ್ಲ. ಚುನಾವಣಾ ಆಯೋಗ, ಐಟಿ, ಸಿಬಿಐ, ಇಡಿ ದಾಳಿಗೆ ಹೆದರಿ ಬಿಜೆಪಿ ಪಕ್ಷವನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ವಾಗ್ದಾಳಿ ನಡೆಸಿದ್ದಾರೆ.
2009 ರಿಂದ ಪ್ರತಿನಿಧಿಸುತ್ತಿರುವ ಬಾರಾಮತಿ ಸಂಸದೀಯ ಕ್ಷೇತ್ರದಿಂದ ಹಿರಿಯ ರಾಜಕಾರಣಿ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದು, 1996 ರಿಂದ 2009ರ ವರೆಗೆ ಈ ಕ್ಷೇತ್ರದಲ್ಲಿ ಶರದ್ ಪವಾರ್ ಪ್ರತಿನಿಧಿಸಿದ್ದರು.
ಚುನಾವಣಾ ಪ್ರಚಾರ ಸಿದ್ಧತೆ ನಡೆಸುತ್ತಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಬಂಧನ ಪ್ರಕರಣದ ಕುರಿತು ಮಾತನಾಡುತ್ತಾ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಭಾರತೀಯ ಚುನಾವಣಾ ಆಯೋಗ, ಐಟಿ, ಇಡಿ, ಸಿಬಿಐ ತನಿಖಾ ಸಂಸ್ಥೆಗಳು ಎಲ್ಲವೂ ಅವರ ಬಳಿಯೇ ಇದೆ. ಇವುಗಳನ್ನು ಬಳಸಿ ಬಿಜೆಪಿ ದಾಳಿ ಮಾಡಿಸುತ್ತಾರೆ ಅಂತಾ ಹೆದರಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಇದೇ ಕಾರಣಕ್ಕಾಗಿ ಕಳೆದ ತಿಂಗಳು ಅಶೋಕ್ ಶಂಕರರಾವ್ ಚವ್ಹಾಣ್ ಅವರೂ ಬಿಜೆಪಿ ಸೇರಿದರು. ಬಿಜೆಪಿಯವರು ಎಲ್ಲಾ ಪಕ್ಷಗಳನ್ನು ಹೀಗೆ ಒಡೆಯುತ್ತಿದ್ದಾರೆ. ಇದು ರಾಜಕೀಯವಲ್ಲ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಾಗ್ದಾಳಿ ನಡೆಸಿದ್ದಾರೆ.