ಕುಂದಾಪುರ: ಸಾಂಸ್ಕೃತಿಕ ಪ್ರಸಾರ ಮತ್ತು ಉನ್ನತಿಗಾಗಿ ಇಂಗ್ಲಂಡ್ನಲ್ಲಿ ಕ್ರಿಯಾಶೀಲವಾಗಿರುವ ಸಂಸ್ಕೃತಿ ಸೆಂಟರ್ ಫಾರ್ ಕಲ್ಚರಲ್ ಎಕ್ಸಲೆನ್ಸ್ ಅವರು ಶಿವರಾತ್ರಿ ಉತ್ಸವದ ಪ್ರಯುಕ್ತ ಲಂಡನ್ನ ಭಾರತೀಯ ವಿದ್ಯಾ ಭವನದಲ್ಲಿ ಆಯೋಜಿಸಿದ್ದ ಸಪ್ತತಾಂಡವ ನೃತ್ಯ ಪ್ರದರ್ಶನ ಇಂಗ್ಲಿಷ್ ಪ್ರಜೆಗಳ ಮನಗೆದ್ದಿದೆ.
ಭಾರತದ ವಿವಿಧ ರಾಜ್ಯಗಳಿಗೆ ಸೇರಿದ ನೃತ್ಯ ಪ್ರಕಾರಗಳನ್ನು ಸಪ್ತತಾಂಡವ ನೃತ್ಯ ಪ್ರದರ್ಶನದಲ್ಲಿ ಪ್ರದರ್ಶನ ಮಾಡಲಾಗಿದೆ.ನೃತ್ಯಗಳಿಗೆ ಆಯಾ ಭಾಷೆಯಲ್ಲಿ ಶಿವಧ್ಯಾನ ಶ್ಲೋಕ ಮತ್ತು ಗೀತೆಗಳನ್ನು ಬಳಸಲಾಗಿತ್ತು.ಯಕ್ಷಗಾನಕ್ಕೆ ಭಾಗವತ ಪ್ರಸನ್ನ ಭಟ್ ಬಾಳ್ಕಲ್ಲು ಅವರು ಹಾಡಿದ ಯಕ್ಷಗಾನ ಶೈಲಿಯ ಶಿವಸ್ತುತಿಗೆ,ರಾಘವೇಂದ್ರ ಹೆಗಡೆ ಯಲ್ಲಾಪುರ ಅವರ ಮದ್ದಲೆ ವಾದನ ಇರುವ ಧ್ವನಿ ಮುದ್ರಣದ ನೆರವು ಪಡೆಯಲಾಗಿತ್ತು.ಆರಂಭದಲ್ಲಿ 21 ಮಂದಿ ಕಿರಿಯ ಕಲಾವಿದರು ಪ್ರಾರ್ಥನಾ ನೃತ್ಯ ಪ್ರದರ್ಶಿಸಿದರು.
ವಿಶಿಷ್ಟ ಕಾರ್ಯಕ್ರಮವು ಇಂಗ್ಲೆಂಡ್ನ ವಿವಿಧ ಭಾಗಗಳಿಂದ ಬಂದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ.
ಕಲಾವಿದರಾದ ಶಿವಾನಿ ಭಂಡಾರ್ಕಾರ್,ಆರ್ಯ ಅರುಣ್,ಲಕ್ಷ್ಮೀ ಅವೀನ್,ರಾಗಸುಧಾ ವಿಂಜಮೂರಿ,ಮಂಜು ಸುನಿಲ್,ಡಾ. ಪ್ರೀತಾ ಅವರು ದಶ್ಮ್ಮಹಾಪಾತ್ರ, ಭರತನಾಟ್ಯ,ಕಥಕ್,ಒಡಿಸ್ಸಿ,ಕುಚಿಪುಡಿ,ಮೋಹಿನಿಯಾಟ್ಟಮ್ ನೃತ್ಯ ಪ್ರಕಾರಗಳ ಶಿವತಾಂಡವ ಪ್ರದರ್ಶಿಸಿದರೆ,ಕರ್ನಾಟಕದ ಯೋಗೀಂದ್ರ ಮರವಂತೆ ಯಕ್ಷಗಾನ ಶೈಲಿಯ ತಾಂಡವನೃತ್ಯ ಸಾದರಪಡಿಸಿದರು.
ರಾಗಸುಧಾ ವಿಂಜಮೂರಿ ಶಿವೋಹಮ್ ಹೆಸರಿನಲ್ಲಿ ಈ ವಿನೂತನ ನೃತ್ಯಸಂಗಮವನ್ನು ಕಲ್ಪಿಸಿ,ನಿರ್ದೇಶಿಸಿದ್ದರು.
ಖ್ಯಾತ ಲೇಖಕ,ಲಂಡನ್ ನೆಹರು ಸೆಂಟರ್ನ ನಿರ್ದೇಶಕ ಅಮಿಷ್ ತ್ರಿಪಾಠಿ ಶಿವರಾತ್ರಿಯ ಮಹತ್ವವನ್ನು ವಿವರಿಸಿ ಕಾರ್ಯಕ್ರಮವನ್ನು ಶ್ಲಾಘಿಸಿದರು.ಭಾರತೀಯ ವಿದ್ಯಾಭವನದ ನಿರ್ದೇಶಕ ಡಾ. ಮತ್ತೂರು ನಂದಕುಮಾರ್ ಕಲಾವಿದರನ್ನು ಗೌರವಿಸಿದರು.
ರಾಧಿಕಾ ಜೋಷಿ ಮತ್ತು ರಾಜ್ ಅಗರ್ವಾಲ್ ನಿರೂಪಿಸಿದರು.ಸುಶಿಲ್ ರಪ್ತಾವರ್ ವಂದಿಸಿದರು.ಅನಿವಾಸಿ ಭಾರತೀಯರು ಲಂಡನ್ನಲ್ಲಿ ಆಯೋಜಿಸಿದ್ದ ಸಪ್ತತಾಂಡವ ನೃತ್ಯ ಪ್ರದರ್ಶನದ ಕುರಿತು ಲಂಡನ್ ಪತ್ರಿಕೆಗಳು ವರದಿಯನ್ನು ಪ್ರಕಟಿಸಿ ಭಾರತೀಯ ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ.