ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತನುಜಾ ಹೆಸರಿನ ನೈಜ ಘಟನೆ ಆಧಾರಿತ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ.ಮುಂಬರುವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಪ್ಲಾನ್ ಮಾಡಲಾಗಿದೆ ಎಂದು ನಿರ್ದೇಶಕ ಹರೀಶ್ ಎಂ.ಡಿ. ಹಳ್ಳಿ ಮಾಹಿತಿ ನೀಡಿದ್ದಾರೆ
ನೀಟ್ ಪರೀಕ್ಷೆಯನ್ನು ಬರೆಯಲಾಗದೇ ಸಂಕಷ್ಟಕ್ಕೆ ಸಿಲುಕಿದ್ದ ಯುವತಿಗೆ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಬಿಎಸ್ವೈ ನೆರವು ನೀಡಿದ್ದರು.350 ಕಿ.ಮೀ ದೂರದಿಂದ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಳು. ಇದು ಯುವತಿಗೆ ಯಾವ ರೀತಿಯಲ್ಲಿ ನೆರವಾಯಿತು ಎಂಬುದರ ಆಧಾರದ ಮೇಲೆ ಚಿತ್ರವನ್ನು ತೆಗೆಯಲಾಗುತ್ತಿದೆ.
ಈ ಚಿತ್ರವನ್ನು ಹರೀಶ್ ಎಂ.ಡಿ. ಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಬಿಎಸ್ವೈ ಈ ಚಿತ್ರದಲ್ಲಿ ಮುಖ್ಯಮಂತ್ರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಬಿಎಸ್ವೈ ಭಾಗದ ಶೂಟಿಂಗ್ ಪೂರ್ಣಗೊಂಡಿರುವುದಾಗಿ ಸ್ವತಃ ನಿರ್ದೇಶಕರೇ ಮಾಹಿತಿ ನೀಡಿದ್ದಾರೆ.
ನೈಜ ಘಟನೆ ಆಧಾರಿತ ಚಿತ್ರವಾದ್ದರಿಂದ ನಟಿಸುವಂತೆ ಅವರನ್ನೇ ಕೇಳಿಕೊಂಡೆವು. ತಕ್ಷಣವೇ ಒಪ್ಪಿಕೊಂಡು ಸಂಪೂರ್ಣ ಬೆಂಬಲ ನೀಡಿದರು. ಚಿತ್ರೀಕರಣದಲ್ಲಿ ಲವಲವಿಕೆಯಿಂದಲೇ ಭಾಗವಹಿಸಿದರು. ಬಿಎಸ್ವೈ ಅವರು ವೃತ್ತಿ ಜೀವನದಲ್ಲಿ ಸಾಕಷ್ಟು ಕ್ಯಾಮೆರಾಗಳನ್ನು ಎದುರಿಸಿರುವುದರಿಂದ ಅವರಿಗೇನು ಮುಜುಗರವಾಗಲಿಲ್ಲ. ಆದರೆ, ಕ್ಯಾಮೆರಾ ಆಯಂಗಲ್ಗಳಿಂದ ಸ್ವಲ್ಪ ಗಲಿಬಿಲಿಗೊಂಡರು ಎಂದು ನಿರ್ದೇಶಕ ಹರೀಶ್ ಎಂ.ಡಿ. ಹಳ್ಳಿ ಹೇಳಿದರು.
ನಿನ್ನೆಯೇ (ಫೆ.19) ಬಿಎಸ್ವೈ ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದುವರೆಗೂ ಶೇ. 90 ರಷ್ಟು ಚಿತ್ರೀಕರಣ ಮುಗಿದಿದೆ.