ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಹೀಗೆ ಅಕಾಲಿಕ ಮರಣಕ್ಕೆ ಒಳಗಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರ ನಿಧನದ ನೋವನ್ನು ಮರೆಯಲಾಗುತ್ತಿಲ್ಲ. ಅಪ್ಪು ಇಹಲೋಕ ತ್ಯಜಿಸಿ ಒಂದು ತಿಂಗಳಾಗಿದೆ. ಜನರ ಪ್ರೀತಿಯ ಅಪ್ಪುವಿನ ಅಕಾಲಿಕ ಸಾವು ಚಿತ್ರರಂಗಕ್ಕೂ, ಕುಟುಂಬ, ಮಿತ್ರರು, ಅಭಿಮಾನಿಗಳಿಗೆ ಅತೀವ ನೋವು ಕೊಟ್ಟಿದೆ.
ಇಂದು ಪುನೀತ್ ಇದ್ದಿದ್ದರೆ ಅವರ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ಕಾಲನ ಕರೆಗೆ ಓಗೊಟ್ಟು ಬಾರದ ಲೋಕಕ್ಕೆ ಪುನೀತ್ ಹೊರಟೇಬಿಟ್ಟರು.
ಹೌದು! ಇಂದು ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಅವರ ವಿವಾಹ ವಾರ್ಷಿಕೋತ್ಸವ. ಸರಿಯಾಗಿ 22 ವರ್ಷಗಳ ಹಿಂದೆ 1999 ಡಿಸೆಂಬರ್ 1ರಂದು ಪುನೀತ್ ತಾವು ಪ್ರೀತಿಸಿದ ಹುಡುಗಿಯನ್ನು ವರಿಸಿದ್ದರು. ತಮ್ಮ ಸ್ನೇಹಿತರ ಮೂಲಕ ಪರಿಚಯವಾದ ಅಶ್ವಿನಿ ಅವರ ಜೊತೆಗಿನ ಸ್ನೇಹ ಪ್ರೀತಿಗೆ ತಿರುಗಿ ಪುನೀತ್ ಮದುವೆಯಾಗಲು ನಿರ್ಧರಿಸಿದ್ದರು. ಇದಕ್ಕೆ ಅಶ್ವಿನಿ ಒಪ್ಪಿಗೆ ಕೇಳಿದಾಗ ಅವರು ಕೂಡ ಸಮ್ಮತಿ ಸೂಚಿಸಿದ್ದರು. ಪುನೀತ್ ಈ ವಿಷಯವನ್ನು ಮನೆಯಲ್ಲಿ ಹೇಳಲು ಹಿಂಜರಿದಿದ್ದು, ತಮ್ಮ ಮದುವೆ ಪ್ರಸ್ತಾಪವನ್ನು ಶಿವಣ್ಣ ಬಳಿ ಪ್ರಸ್ತಾಪಿಸಿದ್ದರು. ಅನಂತರ ಶಿವ ರಾಜ್ಕುಮಾರ್ ಅವರು ತಂದೆ ಡಾ.ರಾಜ್ಕುಮಾರ್ ಬಳಿ ಈ ವಿಚಾರವನ್ನು ಹೇಳಿದಾಗ ಆಯಿತು ಎಂದಿದ್ದರು.
ಪುನೀತ್ ಸಿನಿಮಾ ಕೆಲಸಗಳ ಮಧ್ಯೆಯೂ ಕುಟುಂಬಕ್ಕೆ ಸಮಯ ನೀಡುತ್ತಿದ್ದರು. ಅಶ್ವಿನಿ ಬಗ್ಗೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದರು ಹಾಗೆಯೇ ಅಶ್ವಿನಿ ಪುನೀತ್ ಸಿನಿಮಾಗಳನ್ನು ಸೂಕ್ಷ್ಮವಾಗಿ ಗಮನಿಸಿ ಫೈಟ್, ಡ್ಯಾನ್ಸ್ ಯಾವುದೇ ಸೀನ್ ಇರಲಿ ಅದನ್ನು ವಿಮರ್ಶಿಸಿ ಹೇಳುತ್ತಿದ್ದರು. ನನ್ನ ಸಿನಿಮಾಗಳ ಬೆಸ್ಟ್ ಕ್ರಿಟಿಕ್ ಅಶ್ವಿನಿ ಎಂದು ಹಲವಾರು ಬಾರಿ ಅಪ್ಪು ತಿಳಿಸಿದ್ದಾರೆ. ಪುನೀತ್ ದಂಪತಿಗೆ ಧೃತಿ ಹಾಗೂ ವಂದಿತಾ ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಪುತ್ರಿ ನ್ಯೂರ್ಯಾಕ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಕಿರಿಯ ಪುತ್ರಿ ವಂದಿತಾ ಬೆಂಗಳೂರಿನ ಶಾಲೆಯೊಂದರಲ್ಲಿ ಓದುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಅವರ ವಿವಾಹ ವಾರ್ಷಿಕೋತ್ಸವದ ಇಂದಿನ ವಿಶೇಷ ದಿನವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನೆನಪು ಮಾಡಿಕೊಳ್ಳುತ್ತಿದ್ದು, ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಈ ಸಂದರ್ಭದಲ್ಲಿ ಅಪ್ಪು ಅವರು ನಮ್ಮ ಜತೆ ಇರಬೇಕಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಮುಖ್ಯವಾಗಿ ಪುನೀತ್ ಇಲ್ಲದೆ ಬದುಕುವುದು ಅಶ್ವಿನಿ ಅವರಿಗೆ ಕಷ್ಟವಾಗುತ್ತಿದೆ. ಅವರ ದುಃಖ ಹೇಳ ತೀರದು. ಇಂದು ಅಶ್ವಿನಿ ಅವರಿಗೆ ವಿಶೇಷ ದಿನವಾಗಬೇಕಿತ್ತು. ಆದರೆ, ಪುನೀತ್ ಇಲ್ಲದೆ ಆಯನಿವರ್ಸರಿ ಮಂಕಾಗಿದೆ. ಇನ್ನೂ ಪುನೀತ್ ಕನಸನ್ನು ನನಸು ಮಾಡಲು ಅವರ ಪತ್ನಿ ಅಶ್ವಿನಿ ಪುನೀತ್ ಮುಂದಾಗಿದ್ದಾರೆ.
ಕರ್ನಾಟಕ ಸರ್ಕಾರ ಹಾಗೂ ಅಭಿಮಾನಿಗಳು ಪುನೀತ್ ರಾಜ್ಕುಮಾರ್ಗೆ ತೋರಿಸಿರುವ ಪ್ರೀತಿಗೆ ಧನ್ಯವಾದಗಳನ್ನು ತಿಳಿಸುವ ಮೂಲಕ ಅಶ್ವಿನಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಖಾತೆ ತೆರೆದಿದ್ದರು. ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಹೆಸರಿನ ಕೆಳಗೆ ನಿರ್ಮಾಪಕಿ, ಪಿಆರ್ಕೆ ಪ್ರೊಡಕ್ಷನ್ಸ್ ಮತ್ತು ಪಿಆರ್ಕೆ ಆಡಿಯೋ ಎಂದು ಬರೆದುಕೊಂಡಿದ್ದಾರೆ. ಪುನೀತ್ ಚಿತ್ರರಂಗದ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಸ್ಥಾಪಿಸಿದ ಪಿಆರ್ಕೆ ಪ್ರೊಡಕ್ಷನ್ ಈ ಹಿಂದೆ ಮಹತ್ವದ ಟ್ವೀಟ್ವೊಂದನ್ನು ಹಂಚಿಕೊಂಡಿತ್ತು.
ಹಿಂದೆ ನಡೆದುಹೋಗಿರುವ ಘಟನೆಯನ್ನು ಬದಲಾಯಿಸುವುದು ಅಸಾಧ್ಯವಾಗಿದೆ. ಆದರೆ ಪುನೀತ್ ಅವರಿದ್ದಾಗ ಅವರು ನೀಡಿರುವ ಉತ್ಸಾಹ, ಸ್ಪೂರ್ತಿಯೊಂದಿಗೆ ಪಿಆರ್ಕೆ ಪ್ರೊಡಕ್ಷನ್ ಮತ್ತು ಪಿಆರ್ಕೆ ಆಡಿಯೊ ಸಂಸ್ಥೆಗಳ ಕೆಲಸ ಕಾರ್ಯಗಳು ಮುಂದುವರಿಯಲಿದ್ದು ಅವರ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸುತ್ತೇವೆ. ಅದಕ್ಕಾಗಿ ನಿಮ್ಮೆಲ್ಲರ ಬೆಂಬಲ ಬೇಕು ಎಂದು ಜನರಲ್ಲಿ, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದು, ಈ ಮೂಲಕ ಅಶ್ವಿನಿ, ಪುನೀತ್ ಕನಸುಗಳನ್ನು ನನಸು ಮಾಡುವ ಪಣ ತೊಟ್ಟಿದ್ದಾರೆ. ಪುನೀತ್ ಅವರು ಅ.29ರಂದು ಹೃದಯಾಘಾತದಿಂದ ವಿಕ್ರಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.