ಬಂಟ್ವಾಳ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೇ 6ರಂದು ಸಂಜೆ 4 ಕ್ಕೆ ಬಿ.ಸಿ. ರೋಡ್ನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು-ಬಿ.ಸಿ. ರೋಡ್ ಹೆದ್ದಾರಿಯಲ್ಲಿ ಕೆಲವು ತಾಸುಗಳ ಕಾಲ ವಾಹನ ಸಂಚಾರ ನಿಷೇಧಗೊಳ್ಳುವ ಸಾಧ್ಯತೆ ಇದೆ.
ಯೋಗಿ ಅವರು ಹೆಲಿಕಾಪ್ಟರ್ ಮೂಲಕ ಬಂಟ್ವಾಳ ವಿದ್ಯಾಗಿರಿ ಎಸ್ವಿಎಸ್ ಕಾಲೇಜಿನ ಬಳಿಯ ಹೆಲಿಪ್ಯಾಡ್ಗೆ ಆಗಮಿಸಿ ಅಲ್ಲಿಂದ ಝೀರೋ ಟ್ರಾಫಿಕ್ ಮೂಲಕ ಕೈಕಂಬಕ್ಕೆ ತೆರಳಿ ಅಲ್ಲಿಂದ ಖಾಸಗಿ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸುವರು. ರೋಡ್ ಶೋ ಸಾಗುವ ಹಾದಿಯುದ್ದಕ್ಕೂ ಬ್ಯಾರಿಕೇಡ್ ಹಾಕಲಿದ್ದು, ಅಲ್ಲಲ್ಲಿ ಅಳವಡಿಸಲಾಗುವ ಮೆಟಲ್ ಡಿಟೆಕ್ಟರ್ ಮೂಲಕ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ.
ಎಸ್ಪಿಜಿ ತಂಡ: ಭದ್ರತೆಯ ಹಿನ್ನೆಲೆಯಲ್ಲಿ ರೋಡ್ ಶೋ ವಾಹನದ ಹಿಂದೆ-ಮುಂದೆ ಸುಮಾರು 500 ಮಂದಿ ವಿಶೇಷ ಸ್ವಯಂಸೇವಕರು ಬೇರೆ ಯಾರೂ ವಾಹನದತ್ತ ಆಗಮಿಸದಂತೆ ಎಚ್ಚರಿಕೆ ವಹಿಸುವರು. ಜತೆಗೆ ಯೋಗಿ ಅವರ ಭದ್ರತೆಗಾಗಿ ಎಸ್ಪಿಜಿಯ ತಂಡ ಮಂಡ್ಯದಿಂದ ಬಂಟ್ವಾಳಕ್ಕೆ ಆಗಮಿಸಲಿದೆ.