ಶಿವರಾಮ ಕಾರಂತರ “ಮರಳಿ ಮಣ್ಣಿಗೆ” ಕಾದಂಬರಿಯು ಕನ್ನಡ ಸಾರಸ್ವತ ಲೋಕದಲ್ಲಿ ಮೆಚ್ಚುಗೆ ಪಡೆದ ಸಾಹಿತ್ಯದಾಕರಗಳಲೊಂದು. ಈ ಕಾದಂಬರಿಯಲ್ಲಿ ಕಾರಂತರು ಕರಾವಳಿ ತೀರ ಪ್ರದೇಶದ ಐತಾಳ ಕುಟುಂಬವೊಂದರ ತಲೆಮಾರನ್ನು ಕೇಂದ್ರಬಿಂದುವಾಗಿರಿಸಿಕೊಂಡು ಕಥೆಯನ್ನು ತುಂಬಾ ಸ್ವಾರಸ್ಯವಾಗಿ ಎಣೆದಿದ್ದಾರೆ. ಕಾದಂಬರಿಯನ್ನು ಓದುತ್ತಾ ಹೋದರೆ ಕರಾವಳಿಯ ತೀರ ಪ್ರದೇಶಗಳಿಗೆ ನಮ್ಮನ್ನು ನಮಗರಿವಿಲ್ಲದೆ ಕರೆದೊಯ್ಯತ್ತದೆ
ರಾಷ್ಟ್ರೀಯ ಚಳವಳಿಯ ಕಾವು ಕತೆಯ ಮೂರನೇ ತಲೆಮಾರಿನ ಚಿತ್ರಣದಲ್ಲಿ ಕಾಣಿಸಿಕೊಂಡಿದೆಯಲ್ಲದೆ, ಈ ಚಳವಳದಲ್ಲಿ ಪಾಲುಗೊಂಡಿದ್ದ ಕಾರಂತರು ತಾವೇ ಒಂದು ಪ್ರಮುಖ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ.
ಬಡತನ, ಕೌಟುಂಬಿಕ ಸಂಕಟಗಳ ನಡುವೆಯೂ ಜೀವನದ ಇತ್ಯಾತ್ಮಕ ಮೌಲ್ಯಗಳನ್ನೇ ಬಾಳಿನ ಸಾರ್ಥಕತೆಯ ಸಾರಸರ್ವಸ್ವವೆಂದು ನಂಬಿ ಬಾಳಿದ ಮನುಷ್ಯ ಜೀವಿಗಳ ಹೋರಾಟ, ಆಧುನಿಕ ಜೀವನದ ಶೋಕಿಗೆ ಮರುಳಾಗಿ ಅನೈತಿಕ ನಡತೆಗಳಿಂದ ಬದುಕನ್ನು ಸಾಗಿಸಿ, ಬಿರುಗಾಳಿಗೆ ಸಿಲುಕಿದ ಹಡಗಿನಂತೆ – ಹೊಯ್ದಾಟದ ದುರಂತ ಜೀವನಕ್ಕೆ ತುತ್ತಾದ ವ್ಯಕ್ತಿಗಳ ಕತೆ, ರಾಷ್ಟ್ರೀಯ ಚಳವಳಿಯ ಅಲೆಯಲ್ಲಿ ಎಲ್ಲೆಲ್ಲೋ ಕೊಚ್ಚಿಕೊಂಡು ಹೋಗಿ, ಗುರಿಸಾಧಿಸಲು ವಿಫಲನಾಗಿ, ಕೊನೆಗೂ ಹುಟ್ಟಿದ ನೆಲಕ್ಕೆ ಮರಳಿಬಂದು, ದುಡಿದು ಜೀವಿಸಲು ನಿರ್ಧರಿಸಿದ ಕಥಾನಾಯಕ ರಾಮನ ಕಥೆಯೆ ಈ ಕಾದಂಬರಿ.
ದಕ್ಷಿಣ ಕನ್ನಡದ ಪಾರಂಪರಿಕ ವ್ಯವಸಾಯ ಪದ್ಧತಿ, ಜೀವನ ಶೈಲಿ ಹಾಗು ಜೀವನದ ಬಹು ಮುಖ್ಯ ಭಾಗವಾದ ಕಡಲಿನ ಬಗ್ಗೆ ಹಿಡಿದ ಕನ್ನಡಿಯಂತಿದೆ. ಸ್ವಲ್ಪ ಧೀರ್ಘವೇನೋ ಎನ್ನಿಸಿದರು, ‘ಮರಳಿ ಮಣ್ಣಿಗೆ’ ಯುವಕರೆಲ್ಲ ಓದಬೇಕಾದಂತ ಒಂದು ಉತ್ತಮ ಪುಸ್ತಕ.
ಧಾರವಾಡದ ಮನೋಹರ ಗ್ರಂಥಮಾಲೆಯು 1941ರಲ್ಲಿ ಮೊದಲ ಬಾರಿಗೆ ಈ ಕಾದಂಬರಿಯನ್ನು ಪ್ರಕಟಿಸಿತ್ತು.