ಬೆಳ್ಳಿಯು ಶುದ್ಧತೆಯ ಸಂಕೇತ. ಬೆಳ್ಳಿ ಕಾಲು ಗೆಜ್ಜೆ ಧರಿಸಿ ಮನೆಯ ಹೆಣ್ಣು ಮಕ್ಕಳು ಲಕ್ಷ್ಮಿ ದೇವಿಯಂತೆ ಓಡಾಡಬೇಕು ಇದು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟ ಸಂಪ್ರದಾಯ. ಇದು ಬರೀ ಸಂಪ್ರದಾಯ ಅಲ್ಲದೇ ಇದರ ಹಿಂದೆ ಅನೇಕ ವೈಜ್ಞಾನಿಕ ಕಾರಣಗಳಿವೆ. ಪ್ರತಿಯೊಬ್ಬರಿಗೂ ಅವರ ಮನೆಯಲ್ಲಿ ಅಷ್ಟ ಐಶ್ವರ್ಯ, ಸಿರಿ ಸಂಪತ್ತು, ಲಕ್ಷ್ಮಿ ನಗುನಗುತ್ತಾ ನೆಲೆಸಿರಬೆಕು ಎಂದು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿಯೇ ಲಕ್ಷ್ಮಿ ತಮ್ಮ ಮನೆಯಲ್ಲಿ ನೆಲೆಸಿರಲಿ ಎಂದು ಬಯಸುತ್ತಾರೆ. ಬೆಳ್ಳಿಯ ಅಧಿಪತಿ ಶುಕ್ರ. ಇನ್ನು ಶುಕ್ರ ಎಂದರೆ ಲಕ್ಷ್ಮಿ, ಹಣ ಎಲ್ಲಿರುತ್ತದೆಯೋ ಅಲ್ಲಿ ಸಮೃದ್ಧಿ ಸಂಪತ್ತು ನೆಲೆಸಿರುತ್ತದೆ ಎಂಬುವುದು ನಂಬಿಕೆ.
ಹಿಂದೆ ಮನೆಯಲ್ಲಿ ಪ್ರತಿಯೊಬ್ಬ ಮಕ್ಕಳು ಮತ್ತು ಗೃಹಣಿ ಕಾಲಿಗೆ ಗೆಜ್ಜೆ ಧರಿಸುತ್ತಿದ್ದರು. ಕಾಲು ಗೆಜ್ಜೆಯ ನಾದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಮನೆ ತುಂಬೆಲ್ಲಾ ಹರಡುತ್ತದೆ. ನಮ್ಮ ಧರ್ಮದ ಪ್ರಕಾರ ಹೆಣ್ಣು ಮಕ್ಕಳು ಕಾಲು ಗೆಜ್ಜೆ ಧರಿಸಿದರೆ ಲಕ್ಷ್ಮಿ ದೇವಿ ಸದಾಕಾಲ ನೆಲೆಸುತ್ತಾಳೆ ಎಂಬ ನಂಬಿಕೆ. ಆದರೆ ಇಂದು ಕಾಲು ಗೆಜ್ಜೆಯ ಮೇಲಿನ ಪ್ರೀತಿ ಹೆಣ್ಣು ಮಕ್ಕಳಿಗೆ ಕ್ರಮೇಣ ಕಡಿಮೆ ಆಗಿದೆ. ಕಾಲು ಗೆಜ್ಜೆ ಹಾಕಿದರೆ ಕಾಲು ಕಪ್ಪಾಗುತ್ತದೆ ಮತ್ತು ಅದರ ಶಬ್ಧ ಕಿವಿಗೆ ಅಹಿತಕರವಾಗಿರುತ್ತದೆ ಎಂಬಿತ್ಯಾದಿ ಕಾರಣಗಳಿಂದ ಕಾಲು ಗೆಜ್ಜೆ ಧರಿಸಲು ಹೆಣ್ಣು ಮಕ್ಕಳು ಇಷ್ಟ ಪಡುವುದಿಲ್ಲ.
ಹಿಂದೆ ಹಬ್ಬ ಅಥವಾ ವಿಶೇಷ ಸಮಾರಂಭಗಳಲ್ಲಿ ಗೆಜ್ಜೆಯನ್ನು ಹಾಕಿ ಓಡಾಡುವುದೆಂದರೆ ಅದೊಂದು ರೀತಿಯ ಖುಷಿ ಸಂಭ್ರಮ. ಆದರೆ ಇಂದು ಗೆಜ್ಜೆಯ ಸದ್ದು ಮಾಯವಾಗುತ್ತಾ ಬಂದಿದೆ. ಸಾಂಪ್ರದಾಯಿಕ ಗೆಜ್ಜೆ ತನ್ನ ಅಸ್ತಿತ್ವ ಕಳೆದು ಕೊಂಡಿದೆ. ಇಂದು ಮಾರುಕಟ್ಟೆಗೆ ಕೃತಕ ಗೆಜ್ಜೆಗಳು ಲಗ್ಗೆ ಇಟ್ಟಿವೆ. ಹೆಣ್ಣು ಮಕ್ಕಳು ಅತ್ತ ಕಡೆ ಹೆಚ್ಚಿನ ಒಲವು ತೊರುತ್ತಿದ್ದಾರೆ.
ಇಂದು ಹೆಣ್ಣ್ ಮಕ್ಕಳು ಕಾಲು ಗೆಜ್ಜೆ ಬದಲು ಬೆಳ್ಳಿಯಿಂದಲೇ ತಯಾರಿಸಲ್ಪಡುವ ದೃಷ್ಟಿ ಮಣಿಗಳ ಕಾಲು ಚೈನ್ಗಳನ್ನು ಬಳಕೆ ಮಾಡುತ್ತಾರೆ. ಇಂತಹ ದೃಷ್ಟಿ ಮಣಿಯ ಚೈನ್ಗಳು ಫ್ಯಾಷನ್ ಆಗಿಯೂ ಹೆಣ್ಣು ಮಕ್ಕಳ ಗಮನ ಸೆಳೆೆಯುತ್ತಿದೆ. ಆದ್ದರಿಂದಲೇ ಬೆಳ್ಳಿಯ ಕಾಲು ಗೆಜ್ಜೆಗಳನ್ನು ಹಾಕುವವರ ಸಂಖ್ಯೆ ಇಳಿಕೆಯಾಗಿದೆ.
ಬೆಳ್ಳಿ ಕಾಲು ಗೆಜ್ಜೆಗಳು ಆರೋಗ್ಯದ ದೃಷ್ಟಿಯಿಂದಲೂ ಹೆಣ್ಣು ಮಕ್ಕಳಿಗೆ ಒಳ್ಳೆಯದು. ನಮ್ಮ ದೇಹದಲ್ಲಿರುವ ಉಷ್ಣಾಂಶವನ್ನು ಹೀರಿಕೊಂಡು ನಮ್ಮನ್ನು ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ. ಮಹಿಳೆಯರಲ್ಲಿ ಕಾಣಿಸುವ ಹಾರ್ಮೋನ್ ಸಮಸ್ಯೆಗೂ ಪರಿಹಾರಸಿಗುತ್ತದೆ. ಬೆಳ್ಳಿ ಗೆಜ್ಜೆ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯೋಕೆ ಸಹಾಯ ಮಾಡುವುದರಿಂದ ಹಿಮ್ಮಡಿ ನೋವಿಗೆ ಮುಕ್ತಿ ನಿಡುತ್ತದೆ. ಕಾಲು ನೋವು, ಮರಗಟ್ಟುವಿಕೆ, ಅಶಕ್ತತೆ, ಬೆನ್ನು ನೋವಿನ ಸಮಸ್ಯೆಯನ್ನು ಬೆಳ್ಳಿ ಗೆಜ್ಜೆ ದೂರ ಮಾಡುತ್ತದೆ.