ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಈ ಮಾತು ಇತ್ತೀಚಿನ ದಿನಗಳಲ್ಲಿ ಸ್ವ ಚಿಕಿತ್ಸೆ ಯ ವಿಚಾರದಲ್ಲಿ ಅಕ್ಷರಸಹ ಸತ್ಯ. ಆರೋಗ್ಯದಲ್ಲಿ ಏರು-ಪೇರು ಬಂದಾಗ ವೈದ್ಯರ ಸಲಹೆ ಇಲ್ಲದೆ ತಮ್ಮಷ್ಟಕ್ಕೆ ತಾವು ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಸಾಮಾನ್ಯವಾಗಿದೆ.
ವಾಟ್ಸಪ್ ಯೂಟ್ಯೂಬ್ ಗಳಲ್ಲಿ ಬಂದಂತಹ ವಿಡಿಯೋ ಅಥವಾ ಮಾಹಿತಿಗಳನ್ನು ಗಂಭೀರವಾಗಿ ಪರಿಗಣಿಸಿ ಮೆಡಿಕಲ್ ಶಾಪಿಗೆ ಹೋಗಿ ಆ ಔಷಧಿಯನ್ನು ಪಡೆದುಕೊಳ್ಳುತ್ತಾರೆ. ಈ ಬಗ್ಗೆ ಕಾಕುಂಜೆ ಆಯುರ್ವೇದಿಕ್ ವೆಲ್ ನೆಸ್ ಕ್ಲಿನಿಕ್ ವೈದ್ಯೆ ಡಾ. ಅನುರಾಧ ಹೇಳುವಂತೆ ವೈದ್ಯರ ಸಲಹೆಯೂ ಆರೋಗ್ಯದ ವಿಚಾರದಲ್ಲಿ ಬಹಳ ಮುಖ್ಯ. ತಮ್ಮ ಆರೋಗ್ಯದ ಬಗ್ಗೆ ಹಾಗೂ ನಮ್ಮ ದೇಹದ ಚಟುವಟಿಕೆಗಳ ಬಗ್ಗೆ ನಮ್ಮ ಕುಟುಂಬದ ವೈದ್ಯರಿಗೆ ಸರಿಯಾಗಿ ತಿಳಿದಿರುತ್ತದೆ. ಆದುದರಿಂದ ಯಾವುದೇ ಔಷಧಿಗಳನ್ನು ಸೇವಿಸುವ ಮೊದಲು ಆ ವೈದ್ಯರನ್ನು ಒಂದು ಬಾರಿ ಭೇಟಿಯಾಗಿ ಔಷಧಿ ನಮ್ಮ ದೇಹಕ್ಕೆ ಸೂಕ್ತವೇ ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುತ್ತಾರೆ.
ನಾವು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳುವ ಔಷಧಿಗಳು ತಕ್ಷಣಕ್ಕೆ ಆ ಸಮಸ್ಯೆಯಿಂದ ಪರಿಹಾರ ನೀಡಬಹುದು ಆದರೆ ಮುಂದೆ ಕಂಡುಕೇಳರಿಯದ ಇನ್ನೊಂದು ಸಮಸ್ಯೆ ಎದುರಾಗಬಹುದು ಎನ್ನುತ್ತಾರೆ ಡಾ.ಅನುರಾಧ.
ಸಿರಿಧಾನ್ಯಗಳನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆಯಿಂದ ದೂರವಿರಬಹುದು ಎಂದು ಹೇಳುವುದನ್ನು ಕೇಳಿ ವರುಷಗಳ ಕಾಲ ಅದನ್ನು ಸೇವಿಸಿದರೆ ವಾತದ ಸಮಸ್ಯೆ ಎದುರಾಗಬಹುದು. ಹಾಗೆ ದೇಹವು ತೂಕವನ್ನು ಕಳೆದುಕೊಳ್ಳಬಹುದು. ಆದ್ದರಿಂದ ಯಾವುದೇ ಔಷಧಿ ಆಗಲಿ ಆಹಾರವಾಗಲೀ ವರುಷಗಳ ಕಾಲ ವೈದ್ಯರ ಸಲಹೆ ಇಲ್ಲದೆ ಸೇವಿಸುವುದು ತಪ್ಪು.