ಚಾಮರಾಜನಗರ: ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದ ದೇಗುಲದ ಹುಂಡಿ ಕಾಣಿಕೆ ಏಣಿಕೆ ಕಾರ್ಯ ನಡೆದಿದ್ದು, 2,47,15,655 ರೂ. ಸಂಗ್ರಹವಾಗಿದೆ.
ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ 36 ದಿನಗಳ ಅಂತರದಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು ಈ ವೇಳೆ ಅವರು ಹರಕೆ ಹಾಗೂ ಕಾಣಿಕೆ ರೂಪದಲ್ಲಿ ಹುಂಡಿಯಲ್ಲಿ ಸಂಗ್ರಹವಾಗಿದ್ದು ಅದನ್ನು ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಪೊಲೀಸ್ ಬಂದೂಬಸ್ತ್ ನೊಂದಿಗೆ ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದ ರವರ ಸಮ್ಮುಖದಲ್ಲಿ ಹುಂಡಿ ಕಾಣಿಕೆ ಏಣಿಕೆ ಕಾರ್ಯ ನಡೆಸಿದ್ದು, ಈ ವೇಳೆ ಹುಂಡಿಯಲ್ಲಿ 2 ಕೋಟಿ 47 ಲಕ್ಷ 15 ಸಾವಿರದ 655 ರೂ ಸಂಗ್ರಹವಾಗಿರುವುದಲ್ಲದೆ, ಇದರೊಂದಿಗೆ ಹುಂಡಿಯಲ್ಲಿ 77 ಗ್ರಾಂ ಚಿನ್ನ ಹಾಗೂ ಎರಡು ಕಾಲು ಕೆಜಿ ಬೆಳ್ಳಿ ಆಭರಣಗಳು ಸಂಗ್ರಹವಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದ ತಿಳಿಸಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಪ್ರತಿ ಬಾರಿ ಹುಂಡಿ ಎಣಿಕೆ ಮಾಡುವಾಗಲೂ ಕೋಟಿ ರೂ ಗಿಂತಲೂ ಹೆಚ್ಚಿನ ಹಣ ಸಂಗ್ರಹವಾಗುತ್ತಿರುವುದು ಮಲೆ ಮಹದೇಶ್ವರ ಬೆಟ್ಟದ ವಿಶೇಷವಾಗಿದೆ. ಹೀಗಾಗಿ ಮಲೆಮಹದೇಶ್ವರ ಕೋಟ್ಯಧಿಪತಿಯಾಗಿಯೇ ಮುಂದುವರೆಯುತ್ತಿದ್ದಾನೆ. ಮಲೆ ಮಹದೇಶ್ವರನಿಗೆ ರಾಜ್ಯದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯದಲ್ಲಿಯೂ ಭಕ್ತರಿದ್ದು, ಹುಣ್ಣಿಮೆ ಹಾಗೂ ಅಮಾವಾಸ್ಯೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ, ವಿಶೇಷ ಪೂಜೆ ಹಾಗೂ ಕಾಣಿಕೆಗಳನ್ನು ಹಾಕುತ್ತಾರೆ.