News Karnataka Kannada
Thursday, May 02 2024
ಆರೋಗ್ಯ

ಸುಂದರ ತ್ವಚೆಗೆ ಒಂದಷ್ಟು ಸಲಹೆಗಳು…

Photo Credit :

ಸುಂದರ ತ್ವಚೆಗೆ ಒಂದಷ್ಟು ಸಲಹೆಗಳು...

ಈಗ ಚಳಿಗಾಲ ನಾವೆಷ್ಟೇ ಶರೀರವನ್ನು ಚೆನ್ನಾಗಿಟ್ಟುಕೊಂಡರೂ ಕೈಕಾಲುಗಳಲ್ಲಿ ಬಿರುಕು, ಚರ್ಮದಲ್ಲಿ ಒಡಕು ಕಂಡು ಬರುವುದು ಸಾಮಾನ್ಯ. ನಮ್ಮ ಶರೀರ ಅಂದವಾಗಿಯೂ, ರೋಗ ಮುಕ್ತವಾಗಿಯೂ ಇರಬೇಕಾದರೆ ಚರ್ಮದ ಬಗೆಗಿನ ಒಂದಷ್ಟು ಕಾಳಜಿ ಅಗತ್ಯ.

ವಾತಾವರಣದಲ್ಲಿ ಏರುಪೇರಾದಾಗ ಹಾಗೂ ಶುಚಿಯಾಗಿರಿಸಿಕೊಳ್ಳದ ಸಂದರ್ಭ ಚರ್ಮದ ಮೇಲೆ ಪರಿಣಾಮ ಬೀರಿ ಹಲವು ಚರ್ಮ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾದರೆ ಚರ್ಮ ಸುಂದರವಾಗಿಯೂ, ಆರೋಗ್ಯವಾಗಿಯೂ ಇರಬೇಕಾದರೆ ಏನು ಮಾಡಬೇಕು ಎಂಬ ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕೆ ಚರ್ಮರೋಗ ತಜ್ಞರು ಒಂದಷ್ಟು ಸಲಹೆಗಳನ್ನು ನೀಡುತ್ತಾರೆ.

ಆರೋಗ್ಯವಂತ ಚರ್ಮ ನಮ್ಮದಾಗಿದ್ದರೆ ಮಾತ್ರ ಆರೋಗ್ಯವಂತ ಬದುಕು ನಮ್ಮದಾಗಲು ಸಾಧ್ಯವಾಗುತ್ತದೆ. ಹಾಗಾದರೆ ಆರೋಗ್ಯವಂತ ಚರ್ಮ ಯಾವುದಪ್ಪಾ ಎಂಬ ಪ್ರಶ್ನೆಗಳು ನಮ್ಮಲ್ಲಿ ಏಳುತ್ತವೆ. ಕಾಂತಿಯಿಂದ ಮಿನುಗುವ, ಮೃದುವಾಗಿರುವ ಚರ್ಮವೇ ಆರೋಗ್ಯವಂತ ಚರ್ಮವಾಗಿದ್ದು, ಕೆಲವೊಮ್ಮೆ  ವಾತಾವರಣದ ಮಾಲಿನ್ಯ, ಅತಿ ಉಷ್ಣ, ಅತಿ ಚಳಿ, ಪೌಷ್ಠಿಕ ಆಹಾರದ ಕೊರತೆ, ಅನಾರೋಗ್ಯ ಪರಿಸರಗಳಲ್ಲಿ ನೆಲೆಸುವುದರಿಂದ ಚರ್ಮದ ಆರೋಗ್ಯಕ್ಕೆ ಧಕ್ಕೆಯುಂಟಾಗುತ್ತದೆ.

ಚರ್ಮವು ಆರೋಗ್ಯವಾಗಿರಲು ಸೂರ್ಯನ ಕಿರಣಗಳ ಅಗತ್ಯವಿದೆಯಾದರೂ, ಕೆಲಮೊಮ್ಮೆ ಅಗತ್ಯಕ್ಕಿಂತ ಹೆಚ್ಚಿನ ಸೂರ್ಯನ ಕಾಂತಿಯಿಂದಲೂ ಚರ್ಮಕ್ಕೆ ಹಾನಿಯಾಗುತ್ತದೆ. ಏಕೆಂದರೆ ಸೂರ್ಯ ಕಿರಣದಲ್ಲಿನ ಅತಿನೇರಳೆ ಬಣ್ಣದ ಕಿರಣಗಳು ಚರ್ಮವನ್ನು ಒಣಗುವಂತೆ ಮಾಡಿ ಮೃದುತ್ವವನ್ನು ನಾಶಮಾಡುತ್ತದೆ.  ಸೂರ್ಯ ಕಿರಣಗಳಿಂದಾಗಿ ಉಂಟಾಗುವ ರೆಡಿಯೇಷನ್ನಿಂದಲೂ ಸಹ ಚರ್ಮವು ತನ್ನ ತೇವವನ್ನು ಕಳೆದುಕೊಂಡು ಕಳಾಹೀನವಾಗಿ ಬಿಡುತ್ತದೆ. ಆದುದರಿಂದ ಬೆಳಗಿನ ಎಳೆ ಬಿಸಿಲಿನಲ್ಲಿ ವಾಕಿಂಗ್ ಮಾಡುವುದರಿಂದ ಚರ್ಮ ನುಣುಪಾಗಿರುತ್ತದೆ. ಬಿಸಿಲೇ ತಾಕದಂತೆ ಇದ್ದರೂ ಕೆಲವೊಮ್ಮೆ ಚರ್ಮ ಒಣಗಿ ಸುಕ್ಕು ಕಟ್ಟಿ ಬಿಡುತ್ತದೆ.

ನಾವು ವಾಸವಿರುವ ಮನೆಯ ಸುತ್ತಮುತ್ತ ಕಲುಷಿತ ವಾತಾವರಣ ಇದ್ದಾಗಲೂ ಚರ್ಮಕ್ಕೆ ಕೆಲವು ವ್ಯಾಧಿಗಳು ತಗಲುವ ಸಾಧ್ಯತೆಯಿರುತ್ತದೆ. ಗಾಳಿ, ನೀರು, ಧೂಳು, ಹೊಗೆ, ಅಲರ್ಜಿಕಾರಕ ವಸ್ತುಗಳಿಂದಲೂ ಚರ್ಮಕ್ಕೆ ಹಾನಿಯಾಗುತ್ತದೆ.

ತೇವವಾಗಿ ತಣ್ಣಗಿರುವ ವಾತಾವರಣ ಚರ್ಮಕ್ಕೆ ತುಂಬಾ ಒಳ್ಳೆಯದು. ಹಾಗೆಂದು ಮಿತಿಮೀರಿದ ಚಳಿಯಲ್ಲಿ ಓಡಾಡುವುದು ಒಳ್ಳೆಯದಲ್ಲ. ಚಳಿಗಾಲದಲ್ಲಿ ಚರ್ಮ ಒಡೆಯುತ್ತದೆ. ವೈದ್ಯರು ಹೇಳುವ ಪ್ರಕಾರ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಪೌಷ್ಟಿಕಾಂಶವುಳ್ಳ ಆಹಾರ, ಕಾಯಿಪಲ್ಯೆ, ತರಕಾರಿಗಳನ್ನು ಆಹಾರವಾಗಿ ಸೇವಿಸಬೇಕು. ಕೇಕ್, ತಂಪು ಪಾನೀಯಗಳು, ಸಿಹಿತಿಂಡಿಗಳು, ಮಸಾಲೆಯ ಪದಾರ್ಥ ತಿನ್ನುವುದನ್ನು ಕಡಿಮೆ ಮಾಡಬೇಕು. ಚರ್ಮಕ್ಕೆ ಹೊಂದಿಕೊಳ್ಳುವ ಸಾಬೂನನ್ನು ಅರಿತು ಅದನ್ನೇ ಉಪಯೋಗಿಸಬೇಕು. ಕೃತಕ ಸೌಂದರ್ಯ ವರ್ಧಕಗಳಿಂದ ಆದಷ್ಟು ದೂರವಿರಬೇಕು.  ಬಾದಾಮಿ ಎಣ್ಣೆಯಿಂದ ಚರ್ಮವನ್ನು ಮೃದುವಾಗಿ ಮಾಲೀಸ್ ಮಾಡಬೇಕು. ಬಿಗಿಯಾದ ಉಡುಪುಗಳನ್ನು ಧರಿಸಬಾರದು. ಸೌತೆಕಾಯಿಯನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ, ಚರ್ಮದ ಮೇಲೆ ಇಟ್ಟುಕೊಂಡರೆ ಜಿಡ್ಡು ದೂರವಾಗುತ್ತದೆ. ಧರಿಸುವ ಉಡುಪು ಶುಭ್ರವಾಗಿರುವಂತೆ ನೋಡಿಕೊಳ್ಳಬೇಕು. ಶರೀರ ಹಾಗೂ ಬಟ್ಟೆ ಸ್ವಚ್ಛವಾಗಿರುವಂತೆ ಪ್ರತಿದಿನವೂ ನೋಡಿಕೊಂಡರೆ ಚರ್ಮವನ್ನು ಇತರೆ ವ್ಯಾಧಿಗಳಿಂದ ರಕ್ಷಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು