ಕಾರವಾರ: ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅಂತಹುದೇ ಘಟನೆಯೊಂದು ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ತನ್ನಿಬ್ಬರು ಗಂಡು ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಮಹಿಳೆಯೊಬ್ಬರು ಸಮುದ್ರಕ್ಕೆ ಹಾರಿದ ಘಟನೆ ಕುಮಟಾ ತಾಲೂಕಿನ ಹೆಡ್ಬಂದರ್ ಬಳಿ ಸಮುದ್ರದಲ್ಲಿ ಶನಿವಾರ ಸಂಜೆ ನಡೆದಿದೆ.
ನಿವೇದಿತಾ ನಾಗರಾಜ ಭಂಡಾರಿ ಸಮುದ್ರಕ್ಕೆ ಹಾರಿದವರು. ಸಾಂತಗಲ್ ಗ್ರಾಮದ ನಿವಾಸಿಯಾಗಿರುವ ನಿವೇದಿತಾ ನಿನ್ನೆ ಶನಿವಾರ ಮನೆಯಿಂದ ಸ್ಕೂಟಿಯಲ್ಲಿ ಇಬ್ಬರೂ ಗಂಡುಮಕ್ಕಳನ್ನು ಕರೆತಂದಿದ್ದರು. ಕುಮಟಾದ ಪಿಕ್ಅಪ್ ಬಸ್ನಿಲ್ದಾಣದ ಬಳಿ ಮಕ್ಕಳನ್ನು ಬಿಟ್ಟು ವಾಪಸ್ ಬರುವುದಾಗಿ ಹೇಳಿ ತೆರಳಿದ್ದಾರೆ.
ಆತ್ಮಹತ್ಯೆಗೂ ಮುನ್ನ ಸ್ಕೂಟಿ ಡಿಕ್ಕಿಯೊಳಗೆ ತನ್ನ ಮಾಂಗಲ್ಯ ಸರ, ಕಾಲುಂಗುರ, ಮೊಬೈಲ್ ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ನಿವೇದಿತಾ ಸಮುದ್ರಕ್ಕೆ ಹಾರುವುದನ್ನು ಲೈಫ್ ಗಾರ್ಡ್ ಗಮನಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಮಹಿಳೆ ಕಣ್ಮರೆಯಾಗಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821