ರಾಜ್ಕೋಟ್: ವಂದೇ ಭಾರತ್ ರೈಲಿನ ಮೇಲೆ ಕಲ್ಲು ಎಸೆಯುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆ. ಇದೀಗ ಗುಜರಾತ್ನ ರಾಜ್ಕೋಟ್ ಜಿಲ್ಲೆಯಲ್ಲಿ ಅಹಮದಾಬಾದ್ನಿಂದ ರಾಜ್ಕೋಟ್ಗೆ ಗುಜರಾತ್ನ ಸಚಿವರೊಬ್ಬರು ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಕಲ್ಲೂ ತೂರಾಟ ನಡೆದಿದೆ.
ಗುಜರಾತಿನ ಸಾರಿಗೆ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘ್ವಿ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ರೈಲಿನ ಗಾಜಿಗೆ ಹಾನಿಯಾಗಿದೆ. ಅವರು ಗುರುವಾರ ರಾತ್ರಿ ರೈಲಿನಲ್ಲಿ ಅಹಮದಾಬಾದ್ನಿಂದ ರಾಜ್ಕೋಟ್ಗೆ ಪ್ರಯಾಣಿಸುತ್ತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಾಜ್ಕೋಟ್ನ ಬಿಲೇಶ್ವರ್ ರೈಲು ನಿಲ್ದಾಣದ ಬಳಿ ಈ ಘಟನೆ ವರದಿಯಾಗಿದೆ. ಸಾಂಘ್ವಿ ಇ1 ಕೋಚ್ನಲ್ಲಿದ್ದರು.
ಪೊಲೀಸರ ಪ್ರಕಾರ, ಕೋಚ್ನಲ್ಲಿದ್ದ ರೈಲು ಪ್ರಯಾಣಿಕರು, ಸ್ಥಳೀಯರು ಮತ್ತು ಹತ್ತಿರದ ಗ್ರಾಮದ ಸರಪಂಚ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ನೀಡಿರುವ ಪೊಲೀಸರು, ರೈಲಿನ ಕಿಟಕಿಗಳಿಗೆ ಫೈಬರ್ ಬಲವರ್ಧಿತ ಗಾಜಿನಿಂದ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. ಇದೇ ಕಾರಣಕ್ಕೆ ಕಿಟಕಿಗೆ ಕಲ್ಲು ತಗುಲಿದಾಗ ಗಾಜು ಬಿರುಕು ಬಿಟ್ಟರೂ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದರು.