ಕಲಬುರಗಿ:ಹಲಕರ್ಟಿ ಸಮೀಪದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಮಂಗಳವಾರ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ 8 ವರ್ಷದ ಬಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಏಳು ಜನ ಗಂಭೀರ ಗಾಯಗೊಂಡಿದ್ದಾರೆ.ಶಹಾಬಾದ ನಗರದ ನಿಜಾಮ್ ಬಾಜಾರ್ ಬಡಾವಣೆಯ ನಿವಾಸಿಗಳಾದ ರಮೇಶ ಜೀವ್ಲಾ ಪವಾರ(45) ಮತ್ತು ದಯಾನಂದ ದೇವಸಿಂಗ್ (8) ಮೃತಪಟ್ಟವರು.
ಮೃತರು ಹಾಗೂ ಗಾಯಳು ಒಂದೇ ಕುಟುಂಬಕ್ಕೆ ಸೇರಿದ್ದಾರೆ. ಯರಗೋಳ ಸಮೀಪದ ನಿಂಗಸಳ್ಳಿ ಗ್ರಾಮಕ್ಕೆ ಹಬ್ಬದ ಸಲುವಾಗಿ ಕುಟುಂಬ ಸಮೇತರಾಗಿ ಹೋಗಿ ಮರಳಿ ಬರುವಾಗ ದುರ್ಘಟನೆ ಸಂಭವಿಸಿದೆ.
ಅಪಘತದಲ್ಲಿ ಅನುಶಾಬಾಯಿ ಹೀರೂ ಪವಾರ್, ವೆಂಕಟೇಶ ಹೀರೂ ಪವಾರ್, ದಿನೇಶ ಹೀರೂ ಪವಾರ್, ಯುವರಾಜ ಹೀರೂ ಪವಾರ್, ಸಂಗೀತಾಬಾಯಿ ರಮೇಶ ಪವಾರ್ ಮತ್ತು ದೇವಸಿಂಗ್ ಕಿಶನ್ ಪವಾರ್ ಗಾಯಗೊಂಡಿದ್ದು ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕ ಸಂತೋಷ ಹೀರಾ ಪವಾರ್ ಅವರು ಗಂಭೀರವಾಗಿ ಗಾಯಗೊಂಡು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 150ರ ಹಲಕರ್ಟಿ- ಲಾಡ್ಲಾಪುರ ನಡುವಿನ ರಸ್ತೆಯಲ್ಲಿ ಬಿರುಕು ಬಿಟ್ಟಿದೆ. ಅದರ ದುರಸ್ತಿ ಕಾರ್ಯ ನಡೆಯುತ್ತಿದ್ದು, ರಸ್ತೆಯ ಒಂದು ಬದಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದನ್ನು ಗಮನಿಸದೆವೇಗವಾಗಿ ಕಾರು ಚಲಾಯಿಸಿದ ಚಾಲಕ, ನಂತರ ಬ್ರೇಕ್ ಹಾಕಿರಬಹುದು. ಈ ಕಾರಣಕ್ಕೆ ಕಾರು ಪಲ್ಟಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ.
ತಡರಾತ್ರಿ ಪಿಎಸ್ಐ ತಿರುಮಲೇಶ ಕುಂಬಾರ ಅವರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.