ಕಠ್ಮಂಡು: ನೇಪಾಳದಲ್ಲಿ ಗುರುವಾರ ನಸುಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಭಾರತೀಯ ಯಾತ್ರಿಗಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಠ್ಮಂಡುವಿನಿಂದ ಜನಕ್ಪುರ್ ಕಡೆಗೆ ತೆರಳುತ್ತಿದ್ದ ಬಸ್ ಚುರಿಯಮೈ ದೇವಸ್ಥಾನದ ದಕ್ಷಿಣದಲ್ಲಿರುವ ನದಿಯ ದಡದಲ್ಲಿ ಮಧ್ಯರಾತ್ರಿ 2 ಗಂಟೆಗೆ ಪಲ್ಟಿಯಾಗಿ ಸುಮಾರು 50 ಮೀಟರ್ ಕೆಳಗೆ ಬಿದ್ದಿದೆ. ಮೃತರ ಪೈಕಿ ಓರ್ವ ನೇಪಾಳದವರಾಗಿದ್ದು, ರಾಜಸ್ಥಾನದ ಆರು ಭಾರತೀಯ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಕಚೇರಿಯ ಉಪ ಅಧೀಕ್ಷಕ ಪ್ರದೀಪ್ ಬಹದ್ದೂರ್ ಛೆಟ್ರಿ ಕಠ್ಮಂಡು ಪೋಸ್ಟ್ಗೆ ತಿಳಿಸಿದ್ದಾರೆ.
ಗಾಯಗೊಂಡ ಪ್ರಯಾಣಿಕರು ಮಕ್ವಾನ್ಪುರ ಜಿಲ್ಲೆಯ ಹೆಟೌಡಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಎಸ್ಪಿ ಛೆಟ್ರಿ ತಿಳಿಸಿದ್ದಾರೆ. ಬಸ್ ಚಾಲಕ ನಿದ್ರೆ ಮಂಪರಿನಲ್ಲಿದ್ದ ಕಾರಣ ಅಪಘಾತ ಸಂಭವಿಸಿರಬಹುದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.