ಕೋವಿಡ್ ವೇಳೆ ಕಾಸ್ಟಿಂಗ್ ಕೌಚ್, ಮೀಟೂ ಅಭಿಯಾನ ಜೋರಾಗಿತ್ತು. ಹಲವಾರು ನಟ, ನಟಿಯರು ತಮಗಾದ ಘೋರ ಅನುಭವಗಳನ್ನು ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಈ ಕುರಿತು ಸೂಪರ್ ಮಾಡೆಲ್ ಹಾಗೂ ನಟಿ ಅದಿತಿ ಗೋವಿತ್ರಿಕರ್ ಮಾತನಾಡಿದ್ದಾರೆ.
ಸಿದ್ದಾರ್ಥ್ ಖನ್ನಾ ಅವರ ಜೊತೆಗಿನ ಸಂದರ್ಶನದಲ್ಲಿ ಅದಿತಿ ಮಾತನಾಡಿದ್ದಾರೆ. ‘ದೊಡ್ಡ ಸಿನಿಮಾ ಶೂಟಿಂಗ್ಗೆ ದಕ್ಷಿಣ ಆಫ್ರಿಕಾಗೆ ತೆರಳಿದ್ದೆ. ಆ ವ್ಯಕ್ತಿ ಮಾಡುತ್ತಿದ್ದ ಕೆಲವು ವರ್ತನೆಗಳ ಹಿಂದಿನ ಉದ್ದೇಶ ನನಗೆ ಗೊತ್ತಾಗಲಿಲ್ಲ. ಹೀಗಾಗಿ ನಾನು ನಕ್ಕು ಅಲ್ಲಿಂದ ನಡೆದೆ ಮತ್ತು ನೀವು ಮೂರ್ಖರಾ ಎಂದು ಕೇಳಿದೆ. ಇದು ಅವರ ಅಹಂಗೆ ಪೆಟ್ಟು ಕೊಟ್ಟಿತು. ಆ ಕ್ಷಣವೇ ಶೂಟಿಂಗ್ ಮುಗಿಯಿತು ಎಂದರು. ಮರುದಿನ ಮುಂಬೈಗೆ ಬರಬೇಕಾಯಿತು. ಹೀಗೇಕೆ ಹೇಳಿದರು ಎಂಬುದೇ ಗೊತ್ತಾಗಿರಲಿಲ್ಲ’ ಎಂದಿದ್ದಾರೆ ಅದಿತಿ. ನಂತರ ಮತ್ತೆ ನನ್ನನ್ನು ಕರೆದರು. ನಾಲ್ಕು ದಿನದ ಶೂಟ್ ಬಾಕಿ ಇತ್ತು. ಆದರೆ, ಆ ಸಂದರ್ಭದಲ್ಲಿ ಅವರು ಬೇರೆ ಬೇರೆ ರೀತಿಯ ಕಾರಣಗಳನ್ನು ನೀಡುತ್ತಿದ್ದರು. ಆಗ ನನಗೆ ಎಲ್ಲವೂ ಅರಿವಾಯಿತು. ನಾನು ಅವರ ಆಸೆಯಂತೆ ನಡೆದುಕೊಳ್ಳಲಿಲ್ಲ, ಹೀಗಾಗಿ ಸಿನಿಮಾದಿಂದ ನನ್ನನ್ನು ತೆಗೆದರು ಅನ್ನೋದು ಅರಿವಿಗೆ ಬಂತು’ ಎಂದು ಅದಿತಿ ತಿಳಿಸಿದ್ದಾರೆ.