ಮೈಸೂರು: ಮೈಸೂರಿನ ನಟನರಂಗ ಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ, ಸಹೃದಯರಂಗಾಸಕ್ತರಿಗಾಗಿ ನಟನವು ವಾರಾಂತ್ಯರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ಇದೇ ಜನವರಿ 21ರಂದು ಸಂಜೆ 6.30ಕ್ಕೆ ಸರಿಯಾಗಿ ಮೈಸೂರಿನರಾಮಕೃಷ್ಣ ನಗರದಲ್ಲಿರುವ ನಟನರಂಗಶಾಲೆಯಲ್ಲಿ ಇಟಾಲಿಯನ್ ನಾಟಕಕಾರ ದಾರಿಯೋ ಫೋ ನ ‘ದಿ ವರ್ಚುವಸ್ ಬರ್ಗ್ಲರ್ ಕೃತಿ ಆಧಾರಿತ, ಪ್ರಸಿದ್ಧ ನಾಟಕಕಾರ ಕೆ.ವಿ.ಅಕ್ಷರ ಅವರ ‘ಸಂಸಾರದಲ್ಲಿ ಸನಿದಪ’ ಎಂಬ ನಾಟಕಶ್ರೀ ಮಂಡ್ಯರಮೇಶ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಈ ನಾಟಕವು ಮೇಲ್ನೋಟಕ್ಕೆ ಒಂದು ಸರಳ ಸಾಂಸಾರಿಕ ಹಾಸ್ಯ ನಾಟಕದಂತೆ ನಮಗೆ ಗೋಚರವಾದರೂ ಆಳದಲ್ಲಿ ಇದು ಕೌಟುಂಬಿಕ ವ್ಯಾಪ್ತಿಯ ವೈಯಕ್ತಿಕ ರಾಜಕಾರಣದ ಸುಳಿಯನ್ನು ಅನಾವರಣಗೊಳಿಸುತ್ತದೆ. ಹಾಗಾಗಿ ಇದು ಕುಟುಂಬವೆಂಬ ವ್ಯವಸ್ಥೆಯನ್ನು, ಅದರ ಹಿನ್ನಲೆಯಲ್ಲಿ ಅಡಗಿರುವ ನೈತಿಕತೆಯ ನಂಬಿಕೆಗಳನ್ನು ತುಂಬ ಮೊನಚಾದ ವ್ಯಂಗ್ಯದ ಕತ್ತಿಯಿಂದ ಸೀಳಿ, ಅದಕ್ಕೆಲ್ಲ ಮೂಲವಾಗಿರುವ ಮಧ್ಯಮ ವರ್ಗದ ಡಾಂಭೀಕತೆಯನ್ನು ಬಯಲು ಮಾಡುವ ಇರಾದೆಯುಳ್ಳದ್ದು.ಅಂತೆಯೇ ಜಾಗತೀಕರಣದ ಪ್ರಸ್ತುತ ದಿನಗಳಲ್ಲಿ ಮಧ್ಯಮ, ಮೇಲ್ವರ್ಗದ ಪರಸ್ಪರ ಸಂಬಂಧಗಳ ಸಡಿಲಿಕೆ, ವಿರಸ-ವಿಚ್ಛೇದನ ಸರ್ವೇ ಸಾಮಾನ್ಯವಾದ ಈ ದಿನಗಳಲ್ಲಿ ಇಂತಹ ನಾಟಕಗಳು ಜನರಿಗೆ ತಾಗಬಲ್ಲ ಗುಣವನ್ನು ಹೊಂದಿರುತ್ತವೆಂಬ ನಂಬುಗೆಯೊಡನೆ ಪ್ರಯೋಗವನ್ನು ಸರಳವಾಗಿ ಪ್ರಸ್ತುತಪಡಿಸಲಾಗುತ್ತಿರುವುದು ವಿಶೇಷವಾಗಿದೆ.