ಭಾರತೀಯ ಚಿತ್ರರಂಗದ ದಿಗ್ಗಜ, ನಟ ರಜನಿಕಾಂತ್ ಅವರು ಇಂದು ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ಮಾತನಾಡಿದ ನಟ ರಜನಿಕಾಂತ್, ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ್ದು ನನಗೆ ಸಂತೋಷವಾಗಿದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದ ಕೇಂದ್ರ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಈ ಪ್ರಶಸ್ತಿಯನ್ನು ನನ್ನ ಮಾರ್ಗದರ್ಶಕ ಮತ್ತು ಗುರು ಕೆ. ಬಾಲಚಂದರ್ ಸರ್ ‘ಗೆ ಅರ್ಪಿಸುತ್ತೇನೆ. ಈ ಕ್ಷಣದಲ್ಲಿ ನಾನು ಅವರನ್ನು ನೆನಪಿಸಿಕೊಳ್ಳುತ್ತೇನೆ. ಜೊತೆಗೆ ನನ್ನ ತಂದೆಯ ಸ್ಥಾನದಲ್ಲಿದ್ದು, ಜೀವನದ ಮೌಲ್ಯಗಳನ್ನು ತಿಳಿಸಿದ ನನ್ನ ಸಹೋದರ ಸತ್ಯನಾರಾಯಣ ಗಾಯಕ್ವಾಡ್ ರನ್ನು ನೆನಪಿಸಿಕೊಳ್ಳುತ್ತೇನೆ ಎಂದರು.
ನನ್ನಲ್ಲಿನ ನಟನನ್ನು ಗುರುತಿಸಿ ಚಿತ್ರರಂಗಕ್ಕೆ ಬರುವಂತೆ ಪ್ರೇರೇಪಿಸಿದ ನನ್ನ ಸ್ನೇಹಿತ ಮತ್ತು ಸಹೋದ್ಯೋಗಿ, ಬಸ್ ಸಾರಿಗೆ ಚಾಲಕರಾಗಿದ್ದ ರಾಜ್ ಬಹದ್ದೂರ್‘ ಗೆ ನನ್ನ ಧನ್ಯವಾದಗಳು.
ನನ್ನಲ್ಲಿ ನಂಬಿಕೆ ಇಟ್ಟು ನನಗೆ ಸಿನಿಮಾ ನೀಡಿದ ಎಲ್ಲಾ ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರು, ವಿತರಕರು, ಪ್ರದರ್ಶಕರು, ಮಾಧ್ಯಮವರಿಗೂ ಧನ್ಯವಾದ. ನನ್ನ ಅಭಿಮಾನಿಗಳು, ಎಲ್ಲಾ ತಮಿಳು ಜನರಿಗೆ ನನ್ನ ಧನ್ಯವಾದಗಳು ನೀವು ಇಲ್ಲದೆ, ನಾನು ಯಾರೂ ಅಲ್ಲ ಎಂದರು.