ಚಾಮರಾಜನಗರ: ತಾಲೂಕಿನ ಕುದೇರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಅವರ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ.
ಚಾಮರಾಜನಗರ ತಾಲೂಕಿನ ಜನ್ನೂರು ಗ್ರಾಮದ ರಮೇಶ್ (45) ಕೊಲೆಯಾದ ವ್ಯಕ್ತಿ. ಅವರ ಪತ್ನಿ ಗೀತಾ ಹಾಗೂ ಗುರುಪಾದಸ್ವಾಮಿ ಬಂಧಿತರು. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗೀತಾ ಅವರು ಜ.21 ರಂದು ಕುದೇರು ಠಾಣೆಗೆ ಬಂದು ತನ್ನ ಪತಿ ರಮೇಶ ಅವರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಜ.14 ರಂದು ರಾತ್ರಿ ಹೊರ ಹೋಗಿದ್ದು ವಾಪಸು ಬಂದಿಲ್ಲ. ಆಗಾಗ್ಗೆ ಹೊರಗೆ ಹೋಗುತ್ತಿದ್ದು ವಾಪಸ್ಸು ಬರುತ್ತಿದ್ದರು. ಆದರೆ, ಅಂದು ರಾತ್ರಿ ಹೋದವರು ಬಂದಿಲ್ಲ ಎಂದು ದೂರು ನೀಡಿದ್ದರು.
ನಾಪತ್ತೆ ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಗ್ರಾಮದವರ ಮಾಹಿತಿ ಆಧರಿಸಿ ಗೀತಾಳನ್ನು ವಿಚಾರಣೆ ಮಾಡಿದ ಪೊಲೀಸರು ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಮೇಶ್ ಹಾಗೂ ಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಗೀತಾ ತನ್ನ ಪ್ರಿಯಕರ ಗುರುಪಾದಸ್ವಾಮಿ ಜೊತೆ ಸೇರಿ ರಮೇಶ್ನನ್ನು ಕೊಲೆ ಮಾಡಿ ಆ ಬಳಿಕ ಮೃತದೇಹವನ್ನು ಕುಪ್ಪೆಗಾಲ ಬಳಿಯ ಕಪಿಲ ನದಿಯಲ್ಲಿ ಬೀಸಾಡಿ ಬಂದಿದ್ದಾರೆ. ಬಳಿಕ ಯಾರಿಗೂ ಅನುಮಾನಬರಬಾರದೆಂದು ನಾಪತ್ತೆ ದೂರು ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಗುರುಪಾದಸ್ವಾಮಿಗೂ ನನಗೂ ಅಕ್ರಮ ಸಂಬಂಧವಿದ್ದು ಇಬ್ಬರು ಸೇರಿ ಕೊಲೆ ಮಾಡಿ ಕಪಿಲ ನದಿಗೆ ಬೀಸಾಡಿರುವುದಾಗಿ ವಿಚಾರಣೆ ವೇಳೆ ಆಕೆ ಒಪ್ಪಿಕೊಂಡಿದ್ದಾರೆ.
ಪೊಲೀಸರು ಆರೋಪಿಗಳನ್ನು ಕುಪ್ಪೆಗಾಲ ಬಳಿಯ ಕಪಿಲ ನದಿಗೆ ಕರೆದೊಯ್ದು ಮಾಹಿತಿ ಪಡೆದುಕೊಂಡು ಬಳಿಕ ನದಿಯಿಂದ ಮೃತದೇಹವನ್ನು ಹೊರ ತೆಗೆದಿದ್ದು ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಡಾ.ಕವಿತಾ ಭೇಟಿ ನೀಡಿ ಪರಿಶೀಲಿಸಿದರು.ಈ ಸಂಬಂಧ ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.