ನಂಜನಗೂಡು: ಅಂಗಡಿ ಮುಂದೆ ಗಲಾಟೆ ಮಾಡಬೇಡಿ ಅಂದಿದ್ದಕ್ಕೆ ಮಾಲೀಕನ ತಲೆಗೆ ಚಾಕುವಿನಿಂದ ಇರಿದ ಘಟನೆ ನಂಜನಗೂಡಿನ ವಾಸುಕಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಇರಿತಕ್ಕೆ ಒಳಗಾದ ಗಿರೀಶ್ ರನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕರಪುರ ಗ್ರಾಮದ ಯೋಗಿ ಹಾಗೂ ಹರ್ಷಿತ್ ಕಿರಣ್ ಮತ್ತು ಇತರರ ಮೇಲೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೀ ಅಂಗಡಿ ಮುಂದೆ ಬಂದ ಯೋಗಿ ಹಾಗೂ ಇತರರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿದ್ದರು. ಅಂಗಡಿ ಮುಂದೆ ಗಲಾಟೆ ಮಾಡಿದ್ರೆ ವ್ಯಾಪಾರಕ್ಕೆ ಅಡ್ಡಿಯಾಗುತ್ತದೆ ಹೋಗಿ ಎಂದು ಗಿರೀಶ್ ಹೇಳಿದ್ದಾನೆ. ಈ ವೇಳೆ ಕಿರಿಕ್ ಮಾಡಿ ಎಳೆದಾಡಿ ನೂಕಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ತೆರಳಿದ್ದಾನೆ.
ಅರ್ಧ ಗಂಟೆಗೆ ಹರ್ಷಿತ್ ಕಿರಣ್ ಹಾಗೂ ಇತರರೊಡನೆ ಬಂದ ಯೋಗಿ ಮತ್ತೆ ಕ್ಯಾತೆ ತೆಗೆದು ಗಲಾಟೆ ಮಾಡಿದ್ದಾನೆ. ಈ ವೇಳೆ ತನ್ನ ಬಳಿ ಇದ್ದ ಚಾಕುವಿನಿಂದ ಕುತ್ತಿಗೆ ಮತ್ತು ತಲೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗುತ್ತಿದ್ದ ಗಿರೀಶ್ ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಯೋಗಿ, ಹರ್ಷಿತ್, ಕಿರಣ್ ಹಾಗೂ ಇತರರ ಮೇಲೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.