ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸಿರುವ ಇಸ್ಮತ್ ಪಜೀರ್ ಅವರು ಬರೆದ ಬ್ಯಾರಿ ವಿಮರ್ಶಾ ಲೇಖನಗಳ ಸಂಕಲನ ‘ಪಾಲ’ವನ್ನು ಶನಿವಾರ ಮಂಗಳೂರಿನ ವಿಶ್ವವಿದ್ಯಾನಿಲಯದ ಡಾ.ಶಿವರಾಮ ಕಾರಂತ ಸಭಾಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕ ಪ್ರೊ.ಸೋಮಣ್ಣ ಹೊಂಗಳ್ಳಿ, ಯುವಜನತೆಯಿಂದ ಬ್ಯಾರಿ ಸಾಹಿತ್ಯ ಬೆಳೆಯುತ್ತದೆ. ಕಮ್ಮಟಗಳನ್ನು ಆಯೋಜಿಸಿ ಸೂಕ್ತ ತರಬೇತಿ ನೀಡುವ ಮೂಲಕ ಬ್ಯಾರಿ ಸಾಹಿತ್ಯದಲ್ಲಿ ಗುಣಮಟ್ಟದ ಕೃತಿಗಳು ಹೊರಬರುವಂತೆ ನೋಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿವಿ ಪ್ರಸಾರಾಂಗ ಉಪನಿರ್ದೇಶಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ‘ಕರಾವಳಿಯಲ್ಲಿ ಬೌದ್ಧಿಕ ಲೇಖಕರ ಸಂಖ್ಯೆ ತೀರಾ ಕಡಿಮೆ. ಇತ್ತೀಚಿನ ದಿನಗಳಲ್ಲಿ ಬ್ಯಾರಿ ಮುಸ್ಲಿಂ ಸಮುದಾಯದ ಲೇಖಕರು ಸೈದ್ಧಾಂತಿಕ ದೃಷ್ಟಿಕೋನದಿಂದ ಬರೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಒಂದು ಭಾಷೆಯ ಪ್ರಕಟಿತ ಕೃತಿಗಳ ಕುರಿತ ವಿಮರ್ಶಾ ಸಂಕಲನ ಆ ಭಾಷೆಯ ಪ್ರೌಢಿಮೆಗೆ ಸಾಕ್ಷಿಯಾಗಿದೆ’ ಎಂದರು.
ಬ್ಯಾರಿ ವಾರ್ತೆ ಮಾಸಿಕ ಉಪ ಸಂಪಾದಕ ಮುಹಮ್ಮದಲಿ ಕಮ್ಮರಡಿ ಮಾತನಾಡಿ, ‘ಬ್ಯಾರಿ ಸಾಹಿತ್ಯ ಅಕಾಡೆಮಿಯಲ್ಲಿ ಬ್ಯಾರಿ ಅಧ್ಯಯನ ಪೀಠಕ್ಕೆ ಹೆಚ್ಚಿನ ಜವಾಬ್ದಾರಿ ಇದೆ. ಆಸಕ್ತಿಯಿಂದ ಬರೆಯುವ ಯುವ ಲೇಖಕರನ್ನು ಉತ್ತೇಜಿಸಲು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಬಹುದು ಎಂದರು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಅಬ್ದುಲ್ ಖಾದರ್ ಕುಥೆತ್ತೂರು, ‘ಬ್ಯಾರಿ ಭಾಷೆಯಲ್ಲಿ ಪ್ರಕಟವಾಗಿರುವ ಕೃತಿಗಳ ಕುರಿತು ಪರಾಮರ್ಶೆ ಮಾಡಿರುವ ಲೇಖನಗಳ ಸಂಗ್ರಹ ಇದೇ ಪ್ರಥಮ ಬಾರಿಗೆ ಪ್ರಕಟವಾಗುತ್ತಿದೆ. ಬ್ಯಾರಿಯಲ್ಲಿ ವಿಮರ್ಶಾ ಸಂಕಲನ ಪ್ರಕಟವಾಗದ ಕೊರತೆ ನೀಗಿಸಿದೆ ಎಂದರು.
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಪ್ರಾಂಶುಪಾಲೆ ಡಾ.ಅನಸೂಯಾ ರೈ ಅತಿಥಿಯಾಗಿ ಭಾಗವಹಿಸಿದ್ದರು. ಲೇಖಕ ಇಸ್ಮತ್ ಪಜೀರ್ ಕೃತಿ ರಚನೆ ಕುರಿತು ಮಾತನಾಡಿ ಅನುಭವ ಹಂಚಿಕೊಂಡರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಪ್ರೊ.ಅಬೂಬಕರ್ ಸಿದ್ದೀಕ್ ಅತಿಥಿಗಳನ್ನು ಸ್ವಾಗತಿಸಿದರು. ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಅಹ್ಮದ್ ಬಾವ ಪಡೀಲ್ ವಂದಿಸಿದರು. ಉಪನ್ಯಾಸಕಿ ಶಹಲಾ ರೆಹಮಾನ್ ಸಮಾರಂಭವನ್ನು ನಿರೂಪಿಸಿದರು.