ತುಮಕೂರು: ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿದವರ ಹೋರಾಟದಿಂದ ಯುವ ಜನತೆಯು ಸ್ಫೂರ್ತಿ ಪಡೆದು ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ರಾಜ್ಯ ಸರ್ವೋದಯ ಮಹಾಮಂಡಲದ ಕಾರ್ಯಾಧ್ಯಕ್ಷ, ಹಿರಿಯ ಗಾಂಧೀ ಚಿಂತಕ ತೊಂಡೋಟಿ ಎಲ್. ನರಸಿಂಹಯ್ಯನವರು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯವು ಮಂಗಳವಾರ ಹಮ್ಮಿಕೊಂಡಿದ್ದ ‘ಆಜಾದಿ ಕಾ ಅಮೃತ ಮಹೋತ್ಸವ್’ ಆನ್ಲೈನ್ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.1857ರಿಂದ 1947ರವರೆಗೆ ನಡೆದ ರಾಷ್ಟ್ರೀಯ ಆಂದೋಲನದ ವಿವಿಧ ಘಟ್ಟಗಳನ್ನು ಸ್ಮರಿಸಿಕೊಂಡ ಅವರು, ಗಾಂಧೀಜಿಯವರ ನೇತೃತ್ವದಲ್ಲಿ ರೂಪುಗೊಂಡ ಶಾಂತಿ, ಅಹಿಂಸೆ, ಸ್ವದೇಶಿ, ಸತ್ಯಾಗ್ರಹ ಮೊದಲಾದ ಶ್ರೇಷ್ಠ ಆದರ್ಶಗಳು ನಮಗಿಂದು ಮಾದರಿಯಾಗಬೇಕು ಎಂದರು.
ಮಂದಗಾಮಿಗಳು, ಕ್ರಾಂತಿಕಾರಿಗಳು ಎಲ್ಲರ ಕೊಡುಗೆಗಳಿಗೆ ನಾವಿಂದು ಕೃತಜ್ಞರಾಗಿರಬೇಕು ಎಂದ ಅವರು, ಉಧಮ್ಸಿಂಗ್, ಸುಖದೇವ್, ರಾಜ್ಗುರು, ಭಗತ್ಸಿಂಗ್, ಸುಭಾಷ್ ಚಂದ್ರ ಬೋಸ್ ಮೊದಲಾದ ಹೋರಾಟಗಾರರ ಸಾಹಸಗಳನ್ನು ಸ್ಮರಿಸಿಕೊಂಡರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಕರ್ನಲ್ (ಪ್ರೊ.) ವೈ.ಎಸ್. ಸಿದ್ದೇಗೌಡ, ತೊಂಡೋಟಿಯಂಥ ಹಿರಿಯರ ಚುರುಕು ಚಟುವಟಿಕೆ ಹಾಗೂ ಉತ್ಸಾಹದಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು ಎಂದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿವಿಯ ವಿವಿಧ ಸ್ನಾತಕೋತ್ತರ ವಿಭಾಗಗಳು, ಘಟಕ ಕಾಲೇಜುಗಳು ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಬೀದಿನಾಟಕ, ವಿಚಾರ ಸಂಕಿರಣ, ವಿಶೇಷ ಉಪನ್ಯಾಸ, ವಸ್ತು ಪ್ರದರ್ಶನ, ಪ್ರಬಂಧ ಸ್ಪರ್ಧೆ, ಕಾಲ್ನಡಿಗೆ, ಸೈಕಲ್ ರ್ಯಾಲಿ, ಚಿತ್ರ ಬರೆಯುವ ಸ್ಪರ್ಧೆ, ಚರ್ಚಾ ಸ್ಪರ್ಧೆ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ, ಕುಲಸಚಿವ (ಪರೀಕ್ಷಾಂಗ) ಪ್ರೊ. ನಿರ್ಮಲ್ ರಾಜು, ಪ್ರಾಧ್ಯಾಪಕ ಎಲ್. ಪಿ. ರಾಜು, ಕಾರ್ಯಕ್ರಮದ ಸಂಯೋಜಕ ಡಾ. ಚಿಕ್ಕಣ್ಣ ಮತ್ತಿತರರು ಉಪಸ್ಥಿತರಿದ್ದರು.
‘ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಫೂರ್ತಿ ಪಡೆಯೋಣ’
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.