News Karnataka Kannada
Wednesday, May 01 2024
ಕ್ಯಾಂಪಸ್

ಡಾ.ಬಿ.ಯಶೋವರ್ಮ ಪ್ರಯೋಗಶೀಲ ವ್ಯಕ್ತಿತ್ವದಿಂದ ಶಿಕ್ಷಣಕ್ಕೆ ಅರ್ಥಪೂರ್ಣ ಆಯಾಮ

Yashovarma
Photo Credit : News Kannada

ಉಜಿರೆ, ಮೇ.23: ಸೋಮವಾರ ನಿಧನರಾದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಉಜಿರೆ ಎಸ್.ಡಿ.ಎಂ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ.ಬಿ.ಯಶೋವರ್ಮ ಅವರಿಗೆ ಉಜಿರೆ ಕಾಲೇಜಿನ ಅಧ್ಯಾಪಕರ ಸಂಘ ಆಯೋಜಿಸಿದ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಒಂದು ನಿಮಿಷ ಮೌನಾಚರಣೆಯ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಯಶಸ್ಸಿನ ಹಾದಿಯಲ್ಲಿ ಡಾ.ಬಿ.ಯಶೋವರ್ಮ ಅವರ ಕೊಡುಗೆ ವೈಶಿಷ್ಟ್ಯ ಪೂರ್ಣವಾದದ್ದು. ಶೈಕ್ಷಣಿಕ ಸಾಂಸ್ಥಿಕ ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಶಿಕ್ಷಣ ವಲಯದ ಅರ್ಥಪೂರ್ಣ ಬೆಳವಣಿಗೆಯ ಕನಸನ್ನು ಸಾಕಾರಗೊಳಿಸುವಲ್ಲಿ ಅವರ ಪ್ರಭಾವೀ ವ್ಯಕ್ತಿತ್ವದ ಪಾತ್ರ ಮಹತ್ವದ್ದು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಉಪಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ನುಡಿದರು. ಅವರು ಅಧ್ಯಾಪಕರಾಗಿದ್ದವರು. ತದನಂತರ ಪ್ರಾಂಶುಪಾಲರಾದವರು. ಆಮೇಲೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದವರು. ಈ ಹುದ್ದೆಯನ್ನು ನಿರ್ವಹಿಸುವ ಮೂಲಕ ಶಿಕ್ಷಣ ವಲಯಕ್ಕೆ ಬೇಕಾದ ಸಕಾಲಿಕ ದೂರದೃಷ್ಟಿಯನ್ನು ಕಲ್ಪಿಸಿಕೊಟ್ಟು ಅದಕ್ಕನುಗುಣವಾಗಿ ಶಿಕ್ಷಣ ರಂಗವನ್ನು ಮರುರೂಪಿಸಿದರು. ಈ ದೃಷ್ಟಿಯಿಂದ ಅವರನ್ನು ಶೈಕ್ಷಣಿಕ ರಂಗಕ್ಕೆ ಹೊಸ ಆಯಾಮ ನೀಡಿ ಪ್ರಾಯೋಗಿಕ ಯಶಸ್ಸು ಕಂಡ ಪ್ರಯೋಗಶೀಲ ಶಿಕ್ಷಣ ತಜ್ಞ ಎಂದು ಗುರುತಿಸಬಹುದು ಎಂದು ಅವರು ಹೇಳಿದರು.

ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಉದಯಚಂದ್ರ ಎನ್ ಅವರು ಡಾ.ಯಶೋವರ್ಮ ಅವರು ಕಳೆದ ಮೂರು ದಶಕಗಳ ಅವಧಿಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಮುನ್ನಡೆಗೆ ಬೇಕಾದ ಶೈಕ್ಷಣಿಕ ವಾತಾವರಣ ಸೃಷ್ಟಿಸಿದ ಅಮೂಲ್ಯ ವ್ಯಕ್ತಿತ್ವ ಎಂದು ಸ್ಮರಿಸಿದರು. ಎಸ್.ಡಿ.ಎಂ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ದಿನೇಶ್ ಚೌಟ ಅವರು ಮಾತನಾಡಿ ಡಾ.ಯಶೋವರ್ಮ ಅವರ ಕ್ರಿಯಾಶೀಲತೆಯು ಹಲವು ಶೈಕ್ಷಣಿಕ ಪ್ರಥಮಗಳನ್ನು ರೂಪಿಸಿತು ಎಂದರು.

ಎಸ್.ಡಿ.ಎಂ ಕಾಲೇಜಿನ ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ.ಭಾಸ್ಕರ ಹೆಗಡೆ ಅವರು ಡಾ.ಬಿ.ಯಶೋವರ್ಮ ಅವರ ಶೈಕ್ಷಣಿಕ ಕಾಳಜಿ ಮತ್ತು ಪ್ರಯೋಗಶೀಲ ಪ್ರಜ್ಞೆಯ ವೈಶಿಷ್ಟ್ಯತೆಯನ್ನು ನೆನಪಿಸಿಕೊಂಡರು. ವಿದ್ಯಾರ್ಥಿಗಳನ್ನು ಸಮಗ್ರವಾಗಿ ರೂಪಿಸುವ ನಿಟ್ಟಿನಲ್ಲಿ ಶಿಕ್ಷಣ ರಂಗವನ್ನು ಸನ್ನದ್ಧಗೊಳಿಸಬೇಕು ಎಂಬ ಸದಾಶಯದೊಂದಿಗೆ ಯೋಜನೆಗಳನ್ನು ರೂಪಿಸುತ್ತಿದ್ದರು. ಸಾಂಸ್ಥಿಕ ಬೆಳವಣಿಗೆಯ ಬಗ್ಗೆ ಸದಾ ಯೋಚಿಸಿ ಅದಕ್ಕೆ ತಕ್ಕಂತೆ ಕಾರ್ಯಾನುಷ್ಠಾನ ಸಾಧ್ಯವಾಗಿಸಿದವರು ಎಂದು ಹೇಳಿದರು.

ಎಸ್.ಡಿ.ಎಂ ಕಾಲೇಜಿನ ಆಡಳಿತಾತ್ಮಕ ಕುಲಸಚಿವರಾದ ಡಾ.ಸಂಪತ್‌ಕುಮಾರ್ ಅವರು ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಡಾ.ಬಿ.ಯಶೋವರ್ಮ ಅವರಿಗೆ ವಿಶೇಷ ಕಾಳಜಿಯಿತ್ತು ಎಂದರು. ಶೈಕ್ಷಣಿಕ ವಲಯದ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಬಿತ್ತುವಲ್ಲಿ ಡಾ.ಯಶೋವರ್ಮ ಅವರ ಕೊಡುಗೆ ವಿನೂತನವಾದುದು. ಹೀಗಾಗಿಯೇ ಈಗ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ಅವರ ನಿಧನದಿಂದ ಶೂನ್ಯ ಸೃಷ್ಟಿಯಾದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಾಧ್ಯಾಪಕರಾದ ಡಾ.ಕುಮಾರ ಹೆಗ್ಡೆ ಮಾತನಾಡಿ ಉಜಿರೆಯ ಸೌಂದರ್ಯೀಕರಣದ ಕನಸನ್ನು ಬಹಳ ವರ್ಷಗಳ ಹಿಂದೆಯೇ ಕಂಡಿದ್ದ ಡಾ.ಬಿ.ಯಶೋವರ್ಮ ಅವರು ಆ ಕನಸಿನ ಸಾಕಾರಕ್ಕಾಗಿ ಪ್ರಯತ್ನಿಸಿದ್ದರು ಎಂದರು. ಸ್ವಚ್ಛತೆಯ ಪರಿಕಲ್ಪನೆ ಮತ್ತು ಸ್ವಸ್ಥ ಪರಿಸರ ನಿರ್ಮಾಣಕ್ಕೆ ಅವರು ಮೊದಲ ಆದ್ಯತೆ ನೀಡಿದವರು ಎಂದು ನುಡಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು